RSS

ಸಂಜು weds ಗೀತಾ

.....ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು,
ನನ್ನ ಎಲ್ಲ ಖುಶಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಉರುಳೋ ದನಿ ಥರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ,
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಎಂದೊ ಬ್ರಹ್ಮನು..

ಈ ಹಾಡು ಕೇಳಿದ ತಕ್ಷಣ ನಾನು ಈ ಚಿತ್ರ ನೋಡಲೇಬೇಕು ಅಂತ ನಿರ್ಧರಿಸಿದ್ದೆ .ಪ್ರಾಯಶಃ  ಚಿತ್ರವೊಂದರ  ಬಿಡುಗಡೆಯನ್ನು ನಾನು ಬಕಪಕ್ಷಿಯಂತೆ ನಿರೀಕ್ಷಿಸಿದ ಮೊದಲ ಚಿತ್ರ ಅಂದರೆ ಇದೇನೆ.ಈ ಹಾಡಿನಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಎಷ್ಟು ಪ್ರೀತಿಸುತ್ತಾನೆ ಮತ್ತು ಅವಳಿಗಾಗಿ ಏನೆಲ್ಲಾ ಮಾಡಬಲ್ಲನು ಎಂದು ಹೇಳುವಂತಹ ಆದರ್ಶ ಪ್ರೇಮಿಯೊಬ್ಬನನ್ನು ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯ ನೋಡಿ ;) ಅದಕ್ಕೆ, ಆ ಪ್ರೇಮಿಯ ಆದರ್ಶಕ್ಕೆ, ಈ ಮನಮುಟ್ಟುವ ಸಾಹಿತ್ಯಕ್ಕೆ ನಾನು ಮನಸೋತು ಕಿಟ್ಟಿಯ lover  boy  ಅವತಾರನ್ನು ನೋಡಲು ಕಾಯುತ್ತಿದ್ದೆ. ನಿನ್ನೆ ಈ ಚಿತ್ರವನ್ನು ನೋಡಿದ್ದಾಯ್ತು. :)

ಈ ಚಿತ್ರವನ್ನು ಎರಡು ಆಯಾಮಗಳಿಂದ ನೋಡಬಹುದು.Rather,  ನಾನು ಎರಡು ಆಯಾಮಗಳಲ್ಲಿ ನೋಡಿದ್ದೇನೆ.

೧.ಚಿತ್ರ -ಮನರಂಜನೆಯ ಆಯಾಮದಲ್ಲಿ.

ಆರಂಭ ಚೆನ್ನಾಗಿದೆ. ಹದಿಹರೆಯದ ಯುವಕನಾಗಿ ಕಿಟ್ಟಿ ನೋಡಲು ಚೆನ್ನಾಗಿ ಕಾಣುತ್ತಾರೆ. ಆದರೆ ಕಿಟ್ಟಿ ಚಿತ್ರದುದ್ದಕ್ಕೂ ನಿರ್ಭಾವುಕವಾಗಿಯೇ ಇದ್ದಾರೆ.ಭಾವನೆಯ ಉತ್ತುಂಗವನ್ನು ಅಪೇಕ್ಷಿಸುವ ಈ ಕಥಾ ಹಂದರಕ್ಕೆ ಇಲ್ಲಿ ನ್ಯಾಯ ಸಲ್ಲಿಸಿಲ್ಲ ಅವರು.   ಸವಾರಿ ಚಿತ್ರದಲ್ಲಿ ಕಂಡ ಅವರ ನಟನೆಗೆ ಹೋಲಿಸಿದರೆ ಇಲ್ಲಿ ಅವರ ನಟನೆ ಏನೂ ಇಲ್ಲ. ಅವರ ಧ್ವನಿಯಲ್ಲಿ ಸಹ ಏನೂ ಏರಿಳಿತಗಳಿಲ್ಲ. ಅಷ್ಟು ನಿರ್ಭಾವುಕವಾಗಿ, ನಿರ್ಲಿಪ್ತವಾಗಿ ವಾರ್ತೆಗಳನ್ನ ಓದುವವರು ಮಾತಾಡಬೇಕು. ಆದರೆ ಇಲ್ಲಿ...

ಚಿತ್ರದ ಕೇಂದ್ರ ಬಿಂದು ರಮ್ಯ. ಇದೇ ಮೊಟ್ಟ ಮೊದಲನೆ ಬಾರಿಗೆ, ನನಗೆ ಅವರ ನಟನೆ ಇಷ್ಟವಾಯ್ತು. ಅವರ ನಟನಾ ಕಲೆಗೆ ಸವಾಲೊಡ್ಡುವ ಈ ಪಾತ್ರವನ್ನು ರಮ್ಯಾ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಸವಾಲಿಗೆ ತಕ್ಕ ಜವಾಬು ನೀಡಿದ್ದಾರೆ ಸಹ.ಪ್ರಬುದ್ಧ ಅಭಿನಯದಲ್ಲಿ ಅವರು ಎಲ್ಲರ ಮನಗೆಲ್ಲುತ್ತಾರೆ.

ಶರಣ್, ತಬಲಾನಾಣಿ,ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಕಾಮಿಡಿಯಲ್ಲಿ ಮಿಂಚಿದರೆ, ರಂಗಾಯಣ ರಘು ಪೋಷಕ ಪಾತ್ರದಲ್ಲಿ ತಮ್ಮದೇ ವಿಭಿನ್ನ ಛಾಪು ಒತ್ತಿದ್ದಾರೆ. ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣುವ ಅರುಣ್ ಸಾಗರ್ ಅವರ ಬಗ್ಗೆ ಇಲ್ಲಿ ಹೇಳಲೇ ಬೇಕು.ವಿಕೃತ ಕಾಮಿಯಾಗಿ ಅವರ ಅಭಿನಯ ವಿಭಿನ್ನ ಮತ್ತು ವಿಶೇಷವಾಗಿದೆ.

ಕಥೆಯು ಪೂರ್ವಾರ್ಧದಲ್ಲಿ ಸತ್ವಯುತವಾಗಿದ್ದರೂ ಉತ್ತರಾರ್ಧದಲ್ಲಿ  ಹಳಿ ತಪ್ಪುತ್ತದೆ. ಭಾವನೆಗಳನ್ನು ಪ್ರಭಾವಶಾಲಿಯಾಗಿ ಬಿಂಬಿಸುವಲ್ಲಿ ಇಲ್ಲಿ ಕಿಟ್ಟಿ ಮುಗ್ಗರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹೆಸರಿನಲ್ಲಿ ಜೈಲಿನಲ್ಲಿ  ಹಾಡುವ ಐಟಂ ಸಾಂಗಿನ ಅಗತ್ಯವನ್ನು ಇಲ್ಲಿ ಪ್ರಶ್ನಿಸಲೇ ಬೇಕು. ಅದು ಚಿತ್ರಕ್ಕೆ ಕಾಮಿಕ್ ರಿಲೀಫ್ ಕೊಡಲಿಕ್ಕಾಗಿ ಮಾಡಿದ್ದಾ, ಅಥವಾ ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆಯಲ್ಲಿ ಅವರ ಕಂಠದಲ್ಲಿ ಒಂದು ಹಾಡು ಇರಲೇಬೇಕು ಅಂತ ಮಾಡಿದ್ದಾ ಗೊತ್ತಾಗಲಿಲ್ಲ.  ಅಂತ್ಯ ಪಕ್ಕಾ stereotype ಅನ್ನಿಸದಿದ್ದರೂ, ಹೇಳಿಕೊಳ್ಳುವಂಥಾ "ಡಿಫರೆಂಟ್" ಆಗಿ ಏನು ಇಲ್ಲ.ಪ್ರೇಕ್ಷಕ ಚಿತ್ರದ ಅಂತ್ಯವನ್ನು ಊಹಿಸಬಲ್ಲನು.

ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ cinematography.ಮಳೆ, ಮಡಿಕೇರಿ, ವಿರಾಜಪೇಟೆ, ಸಕಲೇಶಪುರ, ಇವು ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗುತ್ತದೆ. ಹಾಡುಗಳ ಸಾಹಿತ್ಯ, ಸಂಗೀತ ಮತ್ತು ಚಿತ್ರೀಕರಣ ಪರಸ್ಪರ ಪೂರಕವಾಗಿದ್ದು, ಕಥೆಯ ನಿರೂಪಣೆಯಲ್ಲಿ ಕಾಣುವ  ದೌರ್ಬಲ್ಯವನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗಿದೆ.  ಗೀತಸಾಹಿತ್ಯಕ್ಕೆ ನನ್ನ ಎರಡು ಥಂಬ್ಸ್ ಅಪ್, :)

ಒಟ್ಟಿನಲ್ಲಿ ಇದೊಂದು ಸೆಂಟಿಮೆಂಟಲ್ ಮತ್ತು ಸೀರಿಯಸ್ ಚಿತ್ರ.

೨. ಚಿತ್ರ-ಸಾಮಾಜಿಕ ಸಂದೇಶ ನೀಡುವ ಆಯಾಮಯಲ್ಲಿ

ಈ ಚಿತ್ರದ ಮುಖ್ಯ ವಸ್ತು ವಿಕೃತ ಕಾಮ,ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಅದರಿಂದ ವಿಚಲಿತವಾಗುವ ಅವರ ಮನಸ್ಸು. ಬಹುತೇಕ ಹೆಣ್ಣು ಮಕ್ಕಳು ಇದಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೇನೋ ಒಳಗಾಗುವುದುಂಟು. ಇದಕ್ಕೆ ಹಳ್ಳಿ ದಿಲ್ಲಿಯ ಭೇದವಿಲ್ಲ. ವಿಕೃತಕಾಮಿಗಳಿಗೆ ಅಂದಿನಿಂದ ಇಂದಿನ ವರೆಗೂ ಎಂದು ಕೊರತೆ ಇಲ್ಲ.ಇದರ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು, ಮತ್ತು ಗಾಬರಿಗೊಂಡ ಮನಗಳಿಗೆ ಸಾಂತ್ವನ ಮತ್ತು ಅತ್ಯಾಚಾರವನ್ನು ಧಿಕ್ಕರಿಸಿ ನಿಲ್ಲುವ ಧೈರ್ಯ ತುಂಬಲು ನಮ್ಮ ಸಮಾಜ ಯಾಕೋ ಹಿಂದು ಮುಂದು ನೋಡಿ,ಆ ಮಕ್ಕಳನ್ನು ವೃಥಾ ಹೀಗಳಿದು, ಅಂಥಾ ಹೆಣ್ಣು ಮಕ್ಕಳನ್ನು ಬೆರೆಯದೇ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮಟ್ಟಿಗೆ ಇಳಿದಿರುವುದು  ದುರಂತ. ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ,ಪಾಲನೆಯಲ್ಲಿ, ತಂದೆ ತಾಯಿಗಳು ಎಷ್ಟೇ ಎಚ್ಚರ ವಹಿಸಿದರೂ ಸಾಲದು. ಈ ನಿಟ್ಟಿನಲ್ಲಿ ಈ ಚಿತ್ರ ಪಾಲಕರಿಗೆ ಎಚ್ಚರವಾಗಿರುವಂತೆ ಒಂದು ಸೂಕ್ಷ್ಮ ಸಂದೇಶ ನೀಡಿದೆ. ಇದು ಚಿತ್ರದ ಪ್ಲಸ್ ಪಾಯಿಂಟ್.ಆದರೆ ಈ ಚಿತ್ರ ಸಮಸ್ಯೆಯನ್ನು ಮಾತ್ರ ವೈಭವೀಕರಿಸಿ ಅದಕ್ಕೆ ಸೂಕ್ತ ಪರಿಹಾರ ತೋರಿಸುವಲ್ಲಿ ವಿಫಲವಾಗಿದೆ.ಸಮಾಜಕ್ಕೆ ಸಂದೇಶ ಕೊಡಬೇಕೆಂದು ನಿರ್ದೇಶಕ ನಾಗಶೇಖರ್ ನಿರ್ಧರಿಸಿದ್ದರೆ, ಅವರು ಕಿಟ್ಟಿಯ ಪಾತ್ರವನ್ನು  ಈ ನಿಟ್ಟಿನಲ್ಲಿ ಉಪಯೋಗಿಸಬಹುದಿತ್ತು. ಈ ಪಾತ್ರ ಆದರ್ಶ ಪ್ರೇಮಿಯೊಬ್ಬನನ್ನು ಪ್ರತಿಬಿಂಬಿಸಬೇಕಿದ್ದರೆ, ಕಿಟ್ಟಿ ರಮ್ಯಾಗೆ ಇನ್ನೂ ಬಲವಾದ ಆಸರೆಯನ್ನು ಕೇವಲ ಹಾಡಿನಲ್ಲಿ ಅಲ್ಲದೇ, ಪ್ರೇಮದ ಕಲ್ಪನೆಯ ಮಾತಿನಲ್ಲಿ ಮಾತ್ರವಲ್ಲದೇ, ಅವಳಿಗೆ ಸಾಂತ್ವನದ ಮೂಲಕವೂ ನೀಡಬಹುದಿತ್ತು. ಚಿತ್ರದಲ್ಲಿ ಮೊದಲೆರಡರ ಬಗ್ಗೆ ಹೆಚ್ಚು ಆಸ್ಥೆ ವಹಿಸಲಾಗಿದ್ದು, ಕಿಟ್ಟಿ ರಮ್ಯಾಳ ಜೀವನದಲ್ಲಿ ನಡೆದ ಈ ಘಟನೆಯನ್ನು casual  ಆಗಿ ಸ್ವೀಕರಿಸಿದ ಹಾಗೆ ಇಲ್ಲಿ ಪ್ರೇಕ್ಷಕನಿಗೆ ಭಾಸವಾಗುತ್ತದೆ.  Atleast,  ನನಗೆ ಹಾಗನ್ನಿಸಿದೆ. ಕಾರಣ, ಚಿತ್ರದಲ್ಲೆಲ್ಲೂ ಕಾಣದ ಸಾಂತ್ವನದ ಮಾತು ಮತ್ತು ಕಿಟ್ಟಿಯ ನಿರ್ಭಾವುಕ ಅಭಿನಯ.ರಮ್ಯಾಳ ಸ್ಥಿತಿ ಹೇಗಿದ್ದರೂ ಅವಳನ್ನು ಸ್ವೀಕರಿಸುವ ಕಿಟ್ಟಿಯ ಹೃದಯ ವೈಶಾಲ್ಯತೆಯ ಬಗ್ಗೆ ಎರಡು ಮಾತಿಲ್ಲ, ಆದರೆ, ಗಂಡು ಮಕ್ಕಳು ಶೋಷಿತ ಹೆಣ್ಣು ಮಕ್ಕಳ ಬೆಂಬಲಕ್ಕೆ ನಿಂತಂತೆ, ಅದರ ವಿರುದ್ಧ ಧ್ವನಿ ಎತ್ತಿದಂತೆ  ಕಿಟ್ಟಿಯ ಪಾತ್ರವಿದ್ದಿದ್ದರೆ, ಈ ಚಿತ್ರಕ್ಕೆ ಬೇರೆಯದೇ ತಿರುವು ಸಿಕ್ಕಿರುತ್ತಿತ್ತು. ಅದನ್ನು ಬಿಟ್ಟು ಕಿಟ್ಟಿ ಖಳನಾಯಕನ ಕೊಲೆ ಮಾಡಿ ಬಿಸಿರಕ್ತದ ಕೋಪದ ಆವೇಶವನ್ನಷ್ಟೇ ತೋರಿಸಿದ್ದಾರೆ. ಕಿಟ್ಟಿಯ ಪಾತ್ರ ಲವರ್ ಬಾಯ್ ಇಮೇಜನ್ನು ಮಾತ್ರ ಹೊಂದಿರದೇ  matured men ಅಂತಹ ಪಾತ್ರವಾಗಿದ್ದಿದ್ದರೆ ಈ ಚಿತ್ರಕ್ಕೆ ಮತ್ತಷ್ಟು ತೂಕ ಬಂದಿರುತ್ತಿತ್ತು.ಪ್ರೀತಿ ಕುರುಡು,ಕ್ಷಣಿಕ ಕೋಪ, ಆವೇಶ, ಅವೆಲ್ಲ ಏನೇ ಇದ್ದರೂ, ಅದಷ್ಟೇ ಜೀವನ ಅಲ್ಲವಲ್ಲ !

ಚಿತ್ರ ನೋಡಿ ಹೊರಗೆ ಬಂದಮೇಲೆ ನನಗನ್ನಿಸಿದ್ದು ಇಷ್ಟು:

೧.ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ವಿರುದ್ಧದ ಹೋರಾಟಕ್ಕೆ ಸಿಗದ ನೆರವಿನ ಬಗ್ಗೆ ಬೇಜಾರು. ಸಾವಿರಾರು ಜನ ಇಂಥವುಗಳಲ್ಲಿ ಬೆಂದು ಹೋಗಿದ್ದಾರೆ. ಇದಕ್ಕೆ ಕೊನೆ ಎಂದು ?
೨.Why is there no proper sex education at the right time in this country ? ನಾವು ನಮ್ಮ ಮಕ್ಕಳೊಟ್ಟಿಗೆ ಈ ವಿಷಯದ ಬಗ್ಗೆ ಮುಕ್ತವಾಗಿ ಮಾತಾಡಲು ಹಿಂಜರಿಯುತ್ತಿದ್ದೇವಾ ?
೩.Contrasting cultures and cultural differences.  ಪ್ರಸ್ತುತ ಸಮಾಜ ಪೂರ್ವ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಹರಿದು ಹಂಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ sex before marriage, live in relationships ತೀರಾ ಸಾಮಾನ್ಯ ಅನಿಸಿದರೆ, ಇಲ್ಲಿ ಅವುಗಳಿಗೆ ತಿರಸ್ಕಾರಯುತ ಧಿಕ್ಕಾರವಿದೆ, ಇಲ್ಲವೆಂದರೆ ಅನಿವಾರ್ಯದ ಅನುಮೋದನೆ ಇದೆ. Are we unable to strike a balance between these two opposite cultures ? Are we not evolved intellectually to bring in a new thought process, a cultural evolution ? These might sound too much, aren't we educated enough to educate our children and talk to them about this openly ? We, the harbingers of next generation have a serious role to play in this. ನನಗನ್ನಿಸಿದ್ದು ಇಷ್ಟು. ಮಕ್ಕಳಿಗೆ ಪ್ರಯಾವಾಗುತ್ತಾ ಆಗಬಹುದಾದ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಿ, ವಿಪರೀತದ ಪರಿಸ್ಥಿತಿಗಳಲ್ಲಿ ಅವರು ಅನಾಹುತದಿಂದ ತಪ್ಪಿಸಿಕೊಳ್ಳುವ ದಾರಿಯಾದರೂ ತಿಳಿಸಿರಬೇಕು.  ಏನು ಮಾಡಬೇಕು, ಮತ್ತು ಏನು ಮಾಡಬಾರದು ಅನ್ನುವುದರ ಬಗ್ಗೆಯಾದರೂ ಮಕ್ಕಳಿಗೆ ತಿಳುವಳಿಕೆ ನೀಡಬಹುದಲ್ಲವೇ ?

ಬೇಲೂರು ಹಳೆಬೀಡಿನ ಶಿಲ್ಪಗಳು ಯಾಕೋ ಬೇರೆಯದೇ ಉದ್ದೇಶಕ್ಕೆ ಕೆತ್ತಲ್ಪಟ್ಟಿವೆಯಾ ಅಂತ ಅನಿಸಿತು. ಸೌಂದರ್ಯ ಮತ್ತು ಕಲಾಕೌಶಲ್ಯ ಇರಲಿ, Was that an indirect approach to sex education those days ?