RSS

ಸೈರಾ ನರಸಿಂಹ ರೆಡ್ಡಿ

ಪಾಣಿಪತ್ ಚಲನಚಿತ್ರವನ್ನು ನೋಡಿದ ನಂತರ ಈ ಚಲನಚಿತ್ರವನ್ನು ನೋಡಿದ್ದರಿಂದ ಹಲವಾರು ಬಾರಿ ಎರಡೂ ಚಿತ್ರಗಳನ್ನು ಹೋಲಿಸುವ ಹಾಗಾಯಿತು. ಪಾಣಿಪತ್ ಚಲನಚಿತ್ರ ಮರಾಠಾ ಮತ್ತು ಮುಸಲ್ಮಾನರ ಮಧ್ಯೆ ನಡೆದ ಹೋರಾಟದ ಕಥೆಯಾದರೆ ಸೈರಾ ನರಸಿಂಹ ರೆಡ್ಡಿ ಚಿತ್ರ ಆಂಧ್ರದ ಪಾಳೆಯಗಾರರು ಮತ್ತು ಬ್ರಿಟಿಷರಿಗೂ ನಡೆದ ಹೋರಾಟದ ಕಥೆ .

 ಸೈರಾ ನರಸಿಂಹ ರೆಡ್ಡಿ ದಕ್ಷಿಣ ಭಾರತದಲ್ಲಿಸ್ವಾತಂತ್ರ್ಯ ಹೋರಾಟ ನಡೆಸಿದ ಮೊಟ್ಟಮೊದಲನೆಯವನು ಎಂದು ಈ ಚಿತ್ರ ದಾಖಲಿಸುತ್ತದೆ. ಹಲವಾರು ಜಾನಪದ ಕಥೆಗಳು ಮತ್ತು ಕಲ್ಪನೆಗಳನ್ನೆಲ್ಲಾ ಸೇರಿಸಿ ಈ ಚಿತ್ರವನ್ನು ಮಾಡಲಾಗಿದೆ ಎಂದು ಅವರು ಮೊದಲೇ Disclaimer ಹಾಕುವುದರ ಮೂಲಕ ಬಹಳ ಜಾಣತನದಿಂದ ಕೆಲವು ಪ್ರಶ್ನೆಗಳನ್ನು ಏಳದಂತೆ ತಡೆಹಿಡಿದಿದ್ದಾರೆ . ಪಾಣಿಪತ್ ಚಲನಚಿತ್ರಕ್ಕೆ ಹೋಲಿಸಿದರೆ ಇಲ್ಲಿನ ಪಾತ್ರವರ್ಗ ಅತ್ಯಂತ ನ್ಯಾಯಯುತವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದೆ ಎಂದು ಹೇಳಲು ಬಹಳ ಖುಷಿಯಾಗುತ್ತದೆ. ಚಿತ್ರ ತೆಲುಗಿನದ್ದಾದರೂ ಕಿಚ್ಚ ಸುದೀಪ್, ಪವಿತ್ರಾ ಲೋಕೇಶ್ ಮತ್ತು ಲಕ್ಷ್ಮೀ ಗೋಪಾಲಸ್ವಾಮಿ ಯಂತಹ ಕನ್ನಡದ ನಟ ನಟಿಯರು ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸುತ್ತದೆ.

ಚಿತ್ರ ಕನ್ನಡಕ್ಕೆ ಡಬ್ ಆಗಿರುವಾಗ ಪವಿತ್ರಾ ಲೋಕೇಶ್, ಕಿಚ್ಚ ಸುದೀಪ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಅವರೇ ಇದಕ್ಕೆ ಡಬ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಕಿಚ್ಚ ಸುದೀಪ್ ಆಕ್ಟಿಂಗ್ ಬಹಳ subtle ಆಗಿದ್ದು ಅವರ ಪಾತ್ರ ಪೋಷಣೆ ಮತ್ತು ಪಾತ್ರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ . ಚಿರಂಜೀವಿ ಅವರ ಬಗ್ಗೆ ಮತ್ತು ಅವರ ಅಭಿನಯದ ಬಗ್ಗೆ ಮಾತಾಡಲು ಏನೂ ಇಲ್ಲ. ಅವರು ಅಷ್ಟಲ್ಲದೆ ಮೆಗಾಸ್ಟಾರ್ ಅಲ್ಲ ಎಂಬುದನ್ನು ಮತ್ತೊಮ್ಮೆ ಈ ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ. ತಮನ್ನಾ ಮತ್ತು ನಯನತಾರಾ ಅವರು ಅಭಿನಯಿಸಿರುವುದು ಸ್ವಲ್ಪ ನಿರಾಶೆ ಉಂಟು ಮಾಡಿದರೂ ಅದರಿಂದ ಕಥೆಯ ಓಘಕ್ಕೆ ಆಗಲಿ ಅಥವಾ ಚಿರಂಜೀವಿ ಮತ್ತಿತರರ ಅಭಿನಯದ ಅಭಿನಯಕ್ಕಾಗಿ ಯಾವುದೇ ಧಕ್ಕೆ ಬಾರದಂತೆ ನಿರ್ದೇಶಕರು ಜಾಗರೂಕತೆ ವಹಿಸಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಅಮಿತಾಬ್ ಬಚ್ಚನ್ ಅವರ ಅಭಿನಯ ಮನಸೂರೆಗೊಳ್ಳುತ್ತದೆ .ಇದರಿಂದಾಗಿ ದಕ್ಷಿಣ ಭಾರತದ ಪ್ರಮುಖ ನಟರೆಲ್ಲರೂ ಒಂದೇ ಚಿತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಇದೆ.

 ಕ್ಲೈಮಾಕ್ಸನ್ನು ಬಹಳಷ್ಟು ತೆಲುಗು ಸಿನಿಮಾಗಳ ಹಾಗೆ ವೈಭವೀಕರಿಸಿರುವುದರಿಂದ ನಿಜ ಯಾವುದು ಸುಳ್ಳು ಯಾವುದು ಎಂದು ನಿರ್ಧರಿಸಲು ಕಡೆಗೆ ವೀಕ್ಷಕ ಕಷ್ಟಪಡಬೇಕಾದ ಸ್ಥಿತಿ ಉದ್ಭವವಾಗಿದೆ ಎಂದು ನನಗೆ ಅನ್ನಿಸಿದೆ. ಸೈರಾ ನರಸಿಂಹ ರೆಡ್ಡಿ ಯನ್ನು ಬ್ರಿಟಿಷರು ನೇಣು ಹಾಕಿದ್ದು ನಿಜವಾಗಿದ್ದರೆ ನರಸಿಂಹರೆಡ್ಡಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ನೇಣಿಗೆ ಶರಣಾದನೇ ಅಥವಾ ಬ್ರಿಟಿಷರು ಅವನನ್ನು ಇನ್ನಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಯೇ ಎಂಬುದನ್ನು ನಿರ್ಣಯಿಸಲು ಸ್ವಲ್ಪ ಕಷ್ಟವಾಗುತ್ತದೆ .ಅದನ್ನು ಖಚಿತ ಪಡಿಸಿಕೊಳ್ಳಲು ನಾನು ಸೈರಾ ನರಸಿಂಹ ರೆಡ್ಡಿ ಯ ಬಗ್ಗೆ ದಾಖಲೆಗಳನ್ನು ಹುಡುಕುತ್ತಿದ್ದೇನೆ. ಪಕ್ಕದ ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಎಂತೆಂತಹ ಹೋರಾಟಗಳು ನಡೆದಿವೆ ಎಂಬ ಒಂದು ಅಂದಾಜು ಈ ಚಿತ್ರದಿಂದ ನನಗೆ ಸಿಕ್ಕಿದೆ.ಮೇಕಿಂಗ್ ನಲ್ಲಿ ತೆಲುಗು ಸಿನೆಮಾ ಯಾವತ್ತಿದ್ದರೂ ಮುಂದು. ಆ ವಿಷಯವನ್ನು ಮತ್ತೊಮ್ಮೆ ಮಗದೊಮ್ಮೆ ಈ ಚಿತ್ರ ಸಾಬೀತು ಮಾಡಿ ತೋರಿಸಿದೆ. ಪಾಣಿಪತ್ ನಂತೆಯೇ ಡೀಟೈಲಿಂಗ್ ಕೂಡ ಅಮೋಘವಾಗಿ ಈ ಚಿತ್ರದಲ್ಲೂ ಮೂಡಿಬಂದಿದೆ. ಆದರೆ ಈ ಚಲನಚಿತ್ರದ ಕಥೆ ಎಲ್ಲಿಯೂ ಸಹ ಬೋರಾಗದಂತೆ ನಿರ್ದೇಶಕ ಬಹಳ ಚಾಕುಚಕ್ಯತೆಯಿಂದ ನಿರ್ದೇಶನ ಮಾಡಿದ್ದಾರೆ ಎಂದು ಹೇಳಬಹುದು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಚಿತ್ರ ನಾ ನೋಡಿದ್ದು ಸ್ಟಾಲಿನ್. ಅದಾದ ಮೇಲೆ ಶ್ರೀ ಮಂಜುನಾಥ.ಅದಾದ ನಂತರ ಸೈರಾ ನರಸಿಂಹರೆಡ್ಡಿ. ಎಲ್ಲ ಚಿತ್ರಗಳಲ್ಲೂ ಅವರ ಅಭಿನಯ ಅಮೋಘ. ಹಾಗಾಗಿ ಅವರ ಬಳಗಕ್ಕೆ ನನ್ನದೊಂದು ಹೊಸ ಸೇರ್ಪಡೆ .

ಲಾಕ್ ಡೌನ್ ಸಿನಿಮಾ ಮ್ಯರಾಥಾನ್

ಬಾಣಂತನದ ಕಾಲದಿಂದಲೂ ನನಗೆ ಚಿತ್ರ ಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಕಷ್ಟ ಸಾಧ್ಯವಾಗಿತ್ತು. ಏಕೆಂದರೆ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ನನ್ನ ಕಷ್ಟವನ್ನು ಅರಿತ ನನ್ನ ಗಂಡ ೫೫ ಇಂಚಿನ ದೊಡ್ಡ ಟಿವಿ, ಡಿವಿಡಿ ಪ್ಲೇಯರ್ ಮತ್ತು ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ subscription ತೆಗೆದುಕೊಂಡು ನನಗೆ ಮಹದುಪಕಾರ ಮಾಡಿ ಕೊಟ್ಟಿದ್ದರಾದರೂ ನನಗೆ B.Ed ವ್ಯಾಸಂಗದ ಕಾರಣದಿಂದ ಯಾವುದೇ ಚಿತ್ರಗಳನ್ನು ನೋಡಲಾಗಿರಲಿಲ್ಲ. ಲಾಕ್ ಡೌನ್ ಬಂದ ನಂತರ ಕೆಲವು ಚಿತ್ರಗಳನ್ನು ಬಹಳ ಆಸಕ್ತಿಯಿಂದ ನೋಡಿದೆ. ಅವುಗಳ ಪಟ್ಟಿಯನ್ನು ಮೊದಲು ನೀಡುತ್ತೇನೆ.

 ಪಾಣಿಪತ್ (ಹಿಂದಿ)
ಸೈರಾ ನರಸಿಂಹ ರೆಡ್ಡಿ (ಮೂಲ:ತೆಲುಗು, ಕನ್ನಡಕ್ಕೆ ಡಬ್ ಆಗಿದೆ)
 ಸೀಕ್ರೆಟ್ ಸೂಪರ್ಸ್ಟಾರ್ (ಹಿಂದಿ)
 ಕೂರ್ಮಾವತಾರ (ಕನ್ನಡ)
 The bridge on the river kwai (English)
 ತಬ್ಬಲಿಯು ನೀನಾದೆ ಮಗನೆ (ಕನ್ನಡ)
ದಿಯಾ (ಕನ್ನಡ)
 ನಮ್ಮ ಗಣಿ ಬಿಕಾಂ Pass (ಕನ್ನಡ)
 ಮಾಯಾಬಜಾರ್ (ಕನ್ನಡ)

 ನಾನು ನೋಡಲು ಆಯ್ಕೆ ಮಾಡಿಕೊಳ್ಳುವ ಚಿತ್ರಗಳು ಕೆಲವರಿಗೆ ವಿಚಿತ್ರವೆನಿಸಿದರೂ ಸಹ ನನ್ನ ಆಯ್ಕೆ ವಿಚಿತ್ರವೆಂದರೆ ನಾನು ಹೇಳಬಯಸುತ್ತೇನೆ. ಕಮರ್ಷಿಯಲ್ಲಾಗಿ ಓಡುವ ಚಲನಚಿತ್ರಗಳು ನನ್ನನ್ನು ಹೆಚ್ಚು ಸೆಳೆಯುವುದಿಲ್ಲ. ಕಮರ್ಷಿಯಲ್ ಆಗಲು ಚಿತ್ರಕ್ಕೆ ಅದರದೇ ಆದ ಕಾರಣಗಳಿರುತ್ತವೆ. ಆದರೆ ಒಂದು ಚಿತ್ರ ಹೇಗೆ ತಯಾರಾಗಿದೆ ಎಂಬುದು ನನ್ನ ಹುಡುಕಾಟವಾಗಿರುತ್ತದೆ. ಹಾಗಾಗಿ ನಾನು ನೋಡಿರುವ ಚಲನಚಿತ್ರಗಳು ಎಷ್ಟೋ ಜನ ಕೇಳಿರದೆ ಹೋಗಲು ಸಾಧ್ಯವಿದೆ. ಮೊದಲನೇ ಚಿತ್ರದ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ.

 ಚಿತ್ರದ ಹೆಸರು: ಪಾಣಿಪತ್

 ಈ ಚಿತ್ರದ ನಿರ್ದೇಶನ ಆಶುತೋಷ್ ಗೋವಾರಿಕರ್ ಅವರದ್ದು. ಚಿತ್ರವು ಇತಿಹಾಸದ ಪಠ್ಯ ಪುಸ್ತಕವನ್ನು ಓದುವ ಬದಲು ನೋಡಿದಂತಿತ್ತು . ಮೊದಲೇ ಚಿತ್ರವು ಬಹಳ ದೊಡ್ಡದಾದ್ದರಿಂದ (3 hours) ಒಂದೇ ದಿನ ನೋಡುವುದು ಅಸಾಧ್ಯ ಎಂದು ನಾನು ಮನಗಂಡೆ . ಹಾಗಾಗಿ ದಿನಕ್ಕೆ ಅರ್ಧ ಗಂಟೆ ಈ ಚಿತ್ರವನ್ನು ನೋಡಿದೆ. ಮೇಕಿಂಗ್ ಬಹಳ ಅದ್ಭುತವಾಗಿತ್ತು. ಡೀಟೈಲಿಂಗ್ ಅಮೋಘವಾಗಿದೆ. ಆದರೆ ಪಾತ್ರವರ್ಗ ಬಹಳ ನಿರಾಶೆಗೊಳಿಸುತ್ತದೆ. ಮೋನಿ್ಶ್ ಬೆಹ್ಲ್ ಮತ್ತು ಪದ್ಮಿನಿ ಕೊಲ್ಹಾಪುರಿ ಅವರ ನಟನೆ ಹೈಕ್ಲಾಸ್. ಅರ್ಜುನ್ ಕಪೂರ್ ನಿಜಕ್ಕೂ ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ ಎಂಬುದು ಪ್ರತಿ ಫ್ರೇಮಿನಲ್ಲೂ ಗೊತ್ತಾಗುತ್ತದೆ. ಕೃತಿ ಸನೋನ್ ಎಂಬ ಗ್ಲ್ಯಾಮರ್ ಪ್ಚ್ಚುಫ್ಯಾಕ್ಟರ್ ವರ್ಕ್ ಆಗಿಲ್ಲ. ಸಂಜಯ್ ದತ್ ಆಕ್ಟಿಂಗ್ ಬಹಳ ಪರಿಣಾಮಕಾರಿಯಾಗಿತ್ತು .

 ಈ ಚಿತ್ರವನ್ನು ನೀವು ಒಂದೇ ಸರ್ತಿ ಮೂರು ಗಂಟೆ ಕಾಲ ಕುಳಿತು ನೋಡಿದರೆ ಕಡೆಯಲ್ಲಿ ಏತಕ್ಕಾಗಿ ಈ ಚಿತ್ರ ನೋಡಿದೆ ಎಂಬ ಪ್ರಶ್ನೆ ಉದ್ಭವವಾದರೂ ಆಶ್ಚರ್ಯವಿಲ್ಲ. ನಾನು ಒಂದು ವಾರ ಈ ಚಿತ್ರವನ್ನು ನೋಡಿದ್ದರಿಂದ ಆ ಅರ್ಧ ಗಂಟೆಯನ್ನು ಯಾತಕ್ಕಾದರೂ ಬಳಸಬಹುದಿತ್ತು ಎಂದು ಖಂಡಿತಾ ಅನಿಸಿತ್ತು. ಇತಿಹಾಸವನ್ನು ಬೇರೊಂದು ದೃಷ್ಟಿಕೋನದಿಂದ ನಾವು ನೋಡಬಹುದು ಎಂಬುದನ್ನು ಬಿಟ್ಟರೆ ಚಿತ್ರದಿಂದ ನನಗೆ ಏನೂ ಲಾಭವಾಗಲಿಲ್ಲ.

 ಆಶುತೋಷ್ ಗೋವಾರಿಕರ್ ಅವರಿಗೆ ಬಹಳ ನಷ್ಟವಾಗಿದೆ ಎಂಬುದನ್ನು ಈ ಚಿತ್ರದಿಂದ ನಾವು ಗ್ರಹಿಸಬಹುದು. ಅವರು ಏನೋ ಮಾಡಲು ಹೋಗಿ ಏನೋ ಆಗಿದೆ ಎಂದು ನನಗೆ ಅನಿಸಿದೆ. ಆಶುತೋಷ್ ಗೋವಾರಿಕರ್ ಅವರು ಲಗಾನ್ ಮತ್ತು ಸ್ವದೇಸ್ ನಿರ್ದೇಶನ ಮಾಡಿದ ಮೇಲೆ ನಾನು ಅವರಿಂದ ಮತ್ತಷ್ಟು ಸದಭಿರುಚಿಯ ಮತ್ತು ಚಿಂತನೆಗೆ ಹಚ್ಚುವ ಚಿತ್ರಗಳನ್ನು ಅಪೇಕ್ಷಿಸಿದ್ದೆ. ಪಾಣಿಪತ್ ಸದಭಿರುಚಿಯ ಚಿತ್ರವಾಗಿದ್ದರೂ, ಚಿತ್ರದ ವಿಷಯ ಅತ್ಯಂತ ಗಹನವಾಗಿದ್ದರೂ ,ನಿರೂಪಣಾ ತಂತ್ರ ದಯನೀಯವಾಗಿ ಸೋತಿರುವುದರಿಂದ ಚಿತ್ರವೂ ಖಂಡಿತ ಯಾರ ಮನಸ್ಸಿನಲ್ಲೂ ಉಳಿಯಲಾರದು. ಬಾಕ್ಸಾಫೀಸ್ ನಲ್ಲಿ ಉಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ.

ಶ್ರೀದೇವಿ

ಶ್ರೀದೇವಿ ಎಂದರೆ ನಮ್ಮ ಬಾಲ್ಯದ dance role model, ಯುವಕರ dream girl. ಪ್ರಾಯಶಃ ಹೇಮ ಮಾಲಿನಿಯ ನಂತರ ಜನ ಇವರ ಸೌಂದರ್ಯಕ್ಕೆ ಸೆರೆ ಸಿಕ್ಕಿದ್ದು, ರೂಪಕ್ಕೆ ಮಾರು ಹೋಗಿದ್ದು, ಕಣ್ಣೋಟದ ಬಾಣಗಳಿಗೆ ಗಾಯಗೊಂಡಿದ್ದು.

ನನ್ನ ಓರಗೆಯ ಹುಡುಗಿಯರಲ್ಲಿ ಪ್ರಾಯಶಃ "ಹವಾ ಹವಾಯೀ" ಹಾಡಿಗೆ ಗ್ರೂಪ್ ಡಾನ್ಸ್ ಅಥವಾ ಸೋಲೋ ಡಾನ್ಸ್ ಮತ್ತು "ಮೇರೆ ಹಾಥೋ ಮೆ ನೌ ನೌ ಚೂಡಿಯಾ ಹೈ" ಗೆ ಡಾನ್ಸ್ ಮಾಡದ ಹುಡುಗಿಯೇ ಇಲ್ಲ ! " You understand ? You better understand" ಎನ್ನದವರಿಲ್ಲ ! ಶ್ರೀದೇವಿಯ ಮಾತಿನ ಧಾಟಿ, ನಟನೆಯ ಶೈಲಿ, ನಾಟ್ಯದ ಭಂಗಿ, ಒಂದೊಂದೂ ಅದ್ಭುತ, ಅನನ್ಯ, ಅಮೋಘ, ಅಪೂರ್ವ.

ನಾನು ಚಿಕ್ಕಂದಿನಿಂದ ಪುಸ್ತಕದ ಹುಳುವಾಗಿದ್ದರಿಂದ (ಮತ್ತು ಈಗಲೂ ಪುಸ್ತಕದ ಹುಳುವಾಗೇ ಉಳಿದಿರುವುದರಿಂದ) ಬಹಳ ಚಿತ್ರಗಳನ್ನು ನೋಡಿಯೇ ಇಲ್ಲ. ಮನೆಗೊಂದು ಟಿವಿ ಬಂದು, ಕೇಬಲ್ ಟಿವಿ ಪ್ರಚಲಿತವಾದ ಮೇಲೆ ಒಂದಷ್ಟು ಚಿತ್ರಗಳನ್ನು ರಜೆಯಲ್ಲಿ ನೋಡಿದ್ದಿದೆ. ಅವು ಚಾಂದಿನಿ. ಚಾಲ್ ಬಾಜ್, ಮಿ|| ಇಂಡಿಯಾ, ರೂಪ್ ಕಿ ರಾನಿ ಚೋರೋಂ ಕಾ ರಾಜ, ಖುದಾ ಗವಾಹ್, ಘರ್ವಾಲಿ ಬಾಹರ್ವಾಲಿ, ಜುದಾಯಿ.ಇಂಗ್ಲಿಶ್ ವಿಂಗ್ಲಿಶ್ ಅನ್ನು ಥಿಯೇಟರ್ ನಲ್ಲಿ ನೋಡಿದ್ದೆ.

ಶ್ರೀದೇವಿಯ ಅಭಿನಯಕ್ಕೆ ಅವರೇ ಸಾಟಿ. ಬಹುಭಾಷಾ ಪಾಂಡಿತ್ಯ ಸಾಧಿಸುವುದು ಸುಲಭದ ಮಾತಲ್ಲ.  ನಿಜಕ್ಕೂ ಅವರು ದೇಶದ ಮೊದಲ female superstar ಎನ್ನಲಡ್ಡಿಯಿಲ್ಲ. ಹೇಮಾಮಾಲಿನಿ ಡ್ರೀಮ್ ಗರ್ಲ್ ಆಗಿಯೇ ಉಳಿದರೆ, ಇವರು ಡೇರಿಂಗ್ ಪಾತ್ರದಿಂದ ಹಿಡಿದು, ಸದ್ಮಾ ದ ಮನೋರೋಗಿಯ ಪಾತ್ರದ ವರೆಗೂ ಭಿನ್ನ ಭಿನ್ನ ಪಾತ್ರದ ಆಯ್ಕೆಗಳನ್ನು ಮಾಡುತ್ತಾ, ಮಿಂಚುತ್ತಾ ಹೋದವರು. ನನಗಂತೂ ಚಾಂದಿನಿ, ಜುದಾಯಿ ಮತ್ತು ಇಂಗ್ಲಿಶ್ ವಿಂಗ್ಲಿಶ್ ನನ್ನ ಅಚ್ಚುಮೆಚ್ಚಿನ ಚಿತ್ರಗಳು. ಎಷ್ಟೇ ಬಾರಿ ಟಿವಿಯಲ್ಲಿ ಬಂದರೂ ನಾನದನ್ನು ಬಿಡದೇ ನೋಡಿದ್ದೇನೆ. just for sridevi.

ಆದರೆ ಅವರು ಯಂಗ್ ಆಗೇ ಉಳಿಯಲು, ಕಾಣಲು ಸಿಕ್ಕಾಪಟ್ಟೆ ಸರ್ಜರಿಗಳನ್ನು ಮಾಡಿಸಿಕೊಂಡು ದೇಹಕ್ಕೆ ಅಷ್ಟೋಂದು ನೋವು ಮಾಡಿಕೊಂಡಿದ್ದರ ಬಗ್ಗೆ ಬೇಜಾರಿದೆ. ವಯಸ್ಸಾಗುವುದನ್ನು ತಡೆಯಲಂತೂ ಸಾಧ್ಯವಿಲ್ಲ ಅಲ್ಲವೇ ? Why couldn't she consider aging gracefully ? ದೇಹಕ್ಕೆ ದಂಡನೆ ಹೆಚ್ಚಾಯಿತೆ ?

ಅವರು ನಮ್ಮನ್ನಗಿಲಿದ ಕಾರಣ ಏನೇ ಇರಲಿ, ಶ್ರೀದೇವಿ ಇನ್ನು ನೆನಪು ಮಾತ್ರ ಎನ್ನುವ ವಿಷಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಸಾವು ಖಂಡಿತಾ ನ್ಯಾಯವಲ್ಲ. ಭಗವಂತ ನಿಮ್ಮನ್ನು ಸ್ವರ್ಗದಲ್ಲೂ ಚಾಂದಿನಿಯನ್ನಾಗೇ ಇಟ್ಟಿರಲಿ. ಅಲ್ಲೂ ಸಹ ನಿಮ್ಮ ಲಡ್ಡೂಗಳು ಎಲ್ಲರ ಮನ ತಣಿಸಲಿ.

ಹೆಂಡತಿಯಂದರೆ ಹೇಗಿರಬೇಕು ?

ಕಾಶಿನಾಥ್ ರವರ ಚಿತ್ರಗಳು  ಎಷ್ಟು  realistic and practical ಅನ್ನುವುದಕ್ಕೆ ಅವರ ಚಿತ್ರಗಳೆಲ್ಲವೂ ಸಾಕ್ಷಿ. ಚಿತ್ರ ಇವರ ಚಿತ್ರಗಳೆಂದರೆ ಹುಬ್ಬುಗಂಟಿಕ್ಕುತಿದ್ದರು. ಆದರೂ ನೋಡಿಯೇ ನೋಡುತ್ತಿದ್ದರು. ಅದು ಅವರ ಯಶಸ್ಸು.

ನಾನು ಬಹಳವಾಗಿ ಮೆಚ್ಚಿದ್ದ ನಿರ್ದೇಶಕರಲ್ಲಿ ಒಬ್ಬರು ಕಾಶಿನಾಥ್.ವೀಕೆಂಡ್ ವಿತ್ ರಮೇಶ್ ನ ಅವರ ಎಪಿಸೋಡ್   ನಿಜಕ್ಕೂ ಬಹಳ ಚೆನ್ನಾಗಿತ್ತು. ಅವರು ದೈವಾಧೀನರಾದಾಗ ನನಗೆ ನಿಜವಾಗಿಯೂ ಬಹಳ ನೋವಾಗಿತ್ತು. ನಾವು ಚಿಕ್ಕವರಿದ್ದಾಗ ಅವರ ಚಿತ್ರವನ್ನು ನೋಡಲು ಬಿಡುತ್ತಿರಲಿಲ್ಲ. ಹಾಗಾಗಿ, ಅವಳೇ ನನ್ನ ಹೆಂಡತಿ ಚಿತ್ರವನ್ನು ನಾನು ನೋಡಿದ್ದು ಡಿಗ್ರಿಯಲ್ಲಿ. ಆಮೇಲಿಂದ ಎಮ್ಮೆಸ್ಸಿ, ಕೆಲಸ, ಮದುವೆ ಸಂಸಾರಗಳಲ್ಲಿ ಮುಳುಗಿದ್ದ ನಾನು ಎಚ್ಚೆತ್ತಿದ್ದು ಮೊನ್ನೆ ಫೇಸ್ ಬುಕ್ಕಿನ ಒಂದು ಪೋಸ್ಟ್ ಓದಿ.

ಭುವನೇಶ್ವರಿ ಹೆಗಡೆಯವರ ಲಲಿತಪ್ರಬಂಧದ ಪೋಸ್ಟ್ ಅನ್ನು ಶೇರ್ ಮಾಡಿದ್ದ ಗೆಳತುಯೊಬ್ಬರಿಗೆ ಉತ್ತರಿಸಲು ನಾನು ಬಹಳ ಹಿಂದೆ ನೋಡಿದ್ದ ಕಾಶಿನಾಥ್ ರ ಸಿನಿಮಾ ಒಂದರ ಹಾಡನ್ನು ಹುಡುಕುತ್ತಿದ್ದೆ. ಈಗ ಗೂಗಲ್ ಎಂಬ ಪಾತಾಳಗರಡಿ ಇರುವುದರಿಂದ ಹುಡುಕಿದ್ದು ಸಿಕ್ಕೋದಿಲ್ಲ ಅನ್ನೋ ಮಾತೇ ಇಲ್ಲ. ಆ ಹಾಡನ್ನು ಅವರಿಗೆ ಕಳಿಸಿಯಾದ ಮೇಲೆ ನಾನು ಯೂಟ್ಯೂಬ್ ನಲ್ಲಿ ಆ ಚಲನಚಿತ್ರವನ್ನು ವೀಕ್ಷಿಸಿದೆ. ೧೯೯೫ ರಲ್ಲಿ ಬಿಡುಗಡೆಯಾದ ಚಿತ್ರ ಇವತ್ತಿಗೂ ಎಷ್ಟು ಪ್ರಸ್ತುತ ಎನಿಸಿತು ನನಗೆ. ಚಿತ್ರದ ಹೆಸರು "ಹೆಂಡತಿಯೆಂದರೆ ಹೇಗಿರಬೇಕು ?".ಯಾವಾಗಲೋ ಟಿವಿಯಲ್ಲಿ ಆ ಹಾಡನ್ನು ನೋಡಿದ್ದೆ. ಚಲನ ಚಿತ್ರವನ್ನು ನೋಡಲಾಗಿರಲಿಲ್ಲ. ಚಿತ್ರದ ಕಥೆ ಸ್ಥೂಲವಾಗಿ ಹೀಗಿದೆ.

ಪಿಯೂಸಿ ಪಾಸ್ ಮಾಡಿದ ಹುಡುಗನೊಬ್ಬ ತನ್ನ ತಾಯಿ ನೋಡಿದ ಹೆಣ್ಣನ್ನು ಮದುವೆಯಾಗಲು ಇಚ್ಛಿಸದೇ ಕಾಳಿದಾಸ ವರ್ಣನೆ ಮಾಡಿರುವ ಶಾಕುಂತಲೆಯ ತರಹದ ಹೆಣ್ಣನ್ನೇ ಮದುವೆಯಾಗುತ್ತೇನೆ ಎಂಬ ಹುಚ್ಚು ಭ್ರಮೆಗೆ ಬಿದ್ದು, ಅವಳನ್ನು ಹುಡುಕಲು ಬೆಂಗಳೂರಿಗೆ ಬರುತ್ತಾನೆ. ಅಲ್ಲಿ, ಅವನ ಸೋದರ ಮಾವನ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಲೈಬ್ರರಿಯೊಂದರಲ್ಲಿ ಕೆಲಸಕ್ಕೆ ಸೇರುವ ಇವನು, ಅಲ್ಲಿಗೆ ಬರುವ ಹೆಣ್ಣುಮಕ್ಕಳನ್ನು ತೀಕ್ಷ್ಣವಾಗಿ ಗಮನಿಸುತ್ತಿರುತ್ತಾನೆ. ಅಷ್ಟೇ ಅಲ್ಲ, ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳನ್ನೆಲ್ಲಾ ನೋಡಿ ತಲೆಯಲ್ಲಾಡಿಸುತ್ತಿರುತ್ತಾನೆ. ಇಷ್ಟೂ ಸಾಲದು ಎಂಬಂತೆ ಹೆಂಗಸರ ಬಟ್ಟೆ ಹೊಲೆಯುವ ಟೈಲರಿಂಗ್ ಅಂಗಡಿಯಲ್ಲೂ ಹೋಗಿ ಕೆಲಸಕ್ಕೆ ಸೇರುತ್ತಾನೆ. ಈ ವಿಷಯವನ್ನು ತಿಳಿದ ಅವನ ಸೋದರಮಾವ ಅವನ ಹತ್ತಿರ ನೇರವಾಗಿ ಮಾತಾಡಲು, ಇವನು ಇರುವ ವಿಚಾರ ಹೇಳುತ್ತಾನೆ. ಆಗ ಸೋದರ ಮಾವ ತನ್ನ ಹೆಂಡತಿಯ ಮುಂದೆ ಇದೇ ವಿಚಾರ ಎತ್ತಲು, ಅವಳು ಆ ಹುಡುಗನಿಗೆ ಸತ್ಯದ ಅರಿವು ಮೂಡಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ. ಕಡೆಗೆ ಸೋದರ ಮಾವ ಮತ್ತು ಅವನ ಪತ್ನಿ ಮನೋವೈದ್ಯರ ಮೊರೆಹೋಗುತ್ತಾರೆ. ಅವರು ಒಂದು ಉಪಾಯ ಮಾಡುತ್ತಾರೆ. ಕಾಳಿದಾಸ ವರ್ಣಿಸಿದಂತೆ ಗಂಡಸೊಬ್ಬನನ್ನು ಹೆಣ್ಣಂತೆ ಅಲಂಕರಿಸಿ ಇವನ ಮುಂದೆ ನಿಲ್ಲಿಸುತ್ತಾರೆ. ಈ ಹುಡುಗನಿಗೆ ಭ್ರಮನಿರಸನವಾಗಿ ಸತ್ಯ ಯಾವುದು, ಭ್ರಮೆ ಯಾವುದು ಎಂಬ ಅರಿವಾಗುತ್ತದೆ. ಕ್ಲೈಮಾಕ್ಸ್ ಕೂಡಾ ಬಹಳ ಚೆನ್ನಾಗಿದೆ.

ಪಿಯೂಸಿ ಹುಡುಗನ ಪಾತ್ರದಲ್ಲಿ, ಅಂದರೆ ಕಥಾನಾಯಕನ ಪಾತ್ರದಲ್ಲಿ ಕಾಶಿನಾಥ್ ನೈಜ ಅದ್ಭುತ ಅಭಿನಯ ನೀಡಿದ್ದಾರೆ. example is better than precept  ಎಂಬಂತೆ ಅವರೇ ಯುವಜನತೆಯ ಪ್ರತಿನಿಧಿಯಾಗಿ ನಿಂತಿದ್ದಾರೆ. ಅವರ ಸೋದರ ಮಾವನಾಗಿ ಸುಂದರ್ ರಾಜ್, ಮಾವನ ಪತ್ನಿಯಾಗಿ ಗಿರಿಜಾ ಲೋಕೇಶ್ ಅದ್ಭುತ ಅಭಿನಯ. ಸೈಡ್ ಲೈನಲ್ಲಿ ಆವಾಗಲೇ ವೇಶ್ಯಾವಾಟಿಕೆಯ ವಿರುದ್ಧ ದನಿ ಎತ್ತಿದ್ದಾರೆ ಕಾಶಿನಾಥ್.ಈ ಚಿತ್ರವನ್ನು ಇಷ್ಟು ವರ್ಷ ನೋಡಲಾಗಿರಲಿಲ್ಲವಲ್ಲ ಎಂಬ ಬೇಜಾರನ್ನು ನಿವಾರಿಸಿದ ಯೂಟ್ಯೂಬ್ ಗೆ ಕೋಟಿ ವಂದನೆಗಳು. ಖಂಡಿತಾ ಇಂದಿನ ಯುವಕರು ನೋಡಲೇಬೇಕಾದ ಚಿತ್ರವಿದು.

ಪರಮಾತ್ಮನನ್ನು ಅರ್ಥೈಸುತ್ತಾ...

ಪರಮಾತ್ಮ ಚಿತ್ರವು ಟೈಟಲ್ ಇಂದಲೇ ಬಹಳ ಪ್ರಚಾರ ಗಿಟ್ಟಿಸಿದ ಚಿತ್ರ ಎಂದು ಹೇಳಬಹುದೇನೋ...ಪರಮಾತ್ಮ ಪದದ ಅಪಾರ ಅರ್ಥಗಳು, ಪರಮಾರ್ಥಗಳು, ನಾನಾರ್ಥಗಳು ಮತ್ತು ಅಪಾರ್ಥಗಳನ್ನು ಅರಿತಿರುವ ಕರ್ನಾಟಕ ಜನಸಮುದಾಯವು ಯೋಗರಾಜ ಭಟ್ಟರಂಥಾ "ಯೋಗರಾಜ"ರು ಪರಮಾತ್ಮನ ಹುಡುಕಾಟ ನಡೆಸಿ ಅವನ ದರ್ಶನವನ್ನು ಮಾಡಿಸಿ ತಮ್ಮನ್ನು ಪುನೀತಗೊಳಿಸಿಬಿಡುತ್ತಾರೆ ಎಂಬ ಆಸೆಯಿಂದ ಕಾದಿದ್ದರು. ಅಂಥಾ ಭವ್ಯ ದಿವ್ಯ ಪಾವನ ಶ್ರೀಸಾಮಾನ್ಯರಲ್ಲಿ ನಾನೂ ಒಬ್ಬಳು. ಚಿತ್ರ ಬಿಡುಗಡೆಯಾಗಿದ್ದು ಗುರುವಾರ, ೬ನೇ ತಾರೀಖು ಅಕ್ಟೋಬರ್ ನಲ್ಲಿ.ಪರಮಾತ್ಮನ ನೋಡಲು ಕಾತುರದಿಂದ ಶುಕ್ರವಾರಕ್ಕೇ ಟಿಕೆಟ್ಟು ಕೊಡಿಸಿ ಎಂದು ಪತಿ ಪರಮೇಶ್ವರರನ್ನು ಪ್ರಾರ್ಥಿಸಿದ ನಂತರ, ಗೋಪಾಲನ್ ಮಾಲಿನಲ್ಲಿ ಪರಮಾತ್ಮನ ದರ್ಶನಕ್ಕೆ ಪತಿದೇವರು ವ್ಯವಸ್ಥೆ ಮಾಡಿದರು.

ಯೋಗರಾಜರ ಭಟ್ಟರ ಚಿತ್ರಗಳನ್ನು ಥಿಯೇಟರ್ ನಲ್ಲಿ ನೋಡಿದ್ದುದರಲ್ಲಿ ಇದು ಮೂರನೆಯದು. ಮೊದಲನೆಯದು, ಅಫ್ ಕೋರ್ಸ್, ಮುಂಗಾರು ಮಳೆ.ನೂರನೆಯ ದಿನದಂದು ಹೋಗಿ ನೋಡಿದ್ದಾಯ್ತು. ಗಾಳಿಪಟವನ್ನು ಕಾರಣಾಂತರಗಳಿಂದ ಥಿಯೇಟರಿನಲ್ಲಿ ನೋಡಲಾಗಲಿಲ್ಲ. ಮನಸಾರೆಗೆ ಹೋಗುವಷ್ಟರಲ್ಲಿ ಥಿಯೇಟರಿನವರು ಅದನ್ನು ಎತ್ತಂಗಡಿ ಮಾಡುವ ಮನಸ್ಸು ಮಾಡಿದ್ದರು, ಹಾಗಾಗಿ ಅದೂ ಕೈತಪ್ಪಿತು. ಆದ್ದರಿಂದ ಪಂಚರಂಗಿ ಬಿಡುಗಡೆ ಆದಾಗ, ಶ್ರದ್ಧಾ ಭಕ್ತಿಗಳಿಂದ ಮೊದಲ ವಾರದಲ್ಲೇ ಥಿಯೇಟರ್ ಮುಂದೆ ಸಾಲಲ್ಲಿ ನಿಂತು, ಬಾಲ್ಕನಿಗೆ ಟಿಕೆಟ್ ಕೊಳ್ಳಲು ಆದ ನೂಕು ನುಗ್ಗಲಿನಲ್ಲಿ ನನ್ನನ್ನು ನಾನು ಸಂಭಾಳಿಸಿಕೊಂಡು ಟಿಕೆಟ್ ಪಡೆದು, ಹೋಗಿ ನೋಡಿಕೊಂಡು ಬಂದೆ. ಪರಮಾತ್ಮ ಬಿಡುಗಡೆಯಾದಾಗ ಇನ್ನೂ ಮುಂದುವರೆಯಬೇಕೆಂದು ನಿರ್ಧರಿಸಿ ಎರಡನೆಯ ದಿನವೇ ಹೋದೆ. ಈ ಮೂರೂ ಚಿತ್ರಗಳನ್ನು ಯೋಗರಾಜರು ವಿವಿಧ ಆಯಾಮಗಳಲ್ಲಿ ನಿರ್ದೇಶಿಸಿದ್ದರು,ವಿಭಿನ್ನ ಕಥಾನಿರೂಪಣ ಶೈಲಿಗೆ ಹೆಸರಾದವರು. ಜೋಗ ಜಲಪಾತಕ್ಕೆ ಹೊಸ ಆಯಾಮ ನೀಡಿದವರು. ಆದ್ದರಿಂದ ಯೋಗರಾಜರ ಚಿತ್ರವೆಂದರೆ ಅದು ನಿಜವಾಗಿಯೂ ಡಿಫರೆಂಟ್ ಆಗಿಯೇ ಇರುತ್ತದೆ ಎಂದು ನಂಬಿದ ಅವರ ಅಭಿಮಾನಿ ವರ್ಗದಲ್ಲಿ ನಾನೂ ಒಬ್ಬಳು.

ಪುನೀತ್ ರಾಜ್ ಕುಮಾರ್ ಅವರ ಚಿತ್ರ ಪಕ್ಕಾ ಸಾಂಸಾರಿಕ ಚಿತ್ರಗಳಾಗಿದ್ದ ಕಾಲದಿಂದಲೂ ನಾನು ಪುನೀತ್ ಚಿತ್ರಗಳನ್ನು ನೋಡುತ್ತಿದ್ದೆ.ಗಟ್ಟಿಯಾದ ಕಥಾವಸ್ತುಗಳನ್ನು ಹೊಂದಿರುತ್ತಿದ್ದ ಪುನೀತ್ ಅಭಿನಯದ ಚಿತ್ರಗಳನ್ನು ಇಷ್ಟಪಟ್ಟವರಲ್ಲಿ ನಾನೂ ಒಬ್ಬಳು. ಯೋಗರಾಜ ಮತ್ತು ಪುನೀತ್ ಒಟ್ಟಿಗಿರುವ ಚಿತ್ರವಾದ ಪರಮಾತ್ಮ ಇವೆರಡು ಕಾರಣಗಳಿಂದ ನನ್ನ ಗಮನ ಸೆಳೆದಿತ್ತು.
ಪರಮಾತ್ಮ ಚಿತ್ರ ಪರಮಾತ್ಮನ ತರಹವೇ ಇತ್ತು. ಸುಲಭಕ್ಕೆ ಅರ್ಥವಾಗದ ಹಾಗೆ.

ಪಂಚರಂಗಿ ಚಿತ್ರ ಬಿಡುಗಡೆಯಾದಾಗಲೇ ನಾನು ಮತ್ತು ನನ್ನ ಸ್ನೇಹಿತೆ ಕೇವಲ ಮೂರು ಘಂಟೆಗಳ ಕಾಲ ಫೋನಿನಲ್ಲಿ ಈ ಚಿತ್ರದ ಬಗ್ಗೆ ವಿಮರ್ಶೆ ನಡೆಸಿದ್ದೆವು. ಪಂಚರಂಗಿ ಚಿತ್ರವನ್ನು  ಎರಡು ಆಯಾಮಗಳಿಂದ ವೀಕ್ಷಿಸಬೇಕೆಂದು ನಾವು ವಿಮರ್ಶಿಸಿದೆವು. ಗಟ್ಟಿ ಕತೆಯ ಹಪಹಪಿಕೆಯಿಂದ ಹೊರಬಂದು ಕೇವಲ ಟೈಂ ಪಾಸಿಗಾಗಿ ನೋಡಿ ವಿಡಂಬನೆಯಲ್ಲಿ ಅಡಗಿರುವ ಸತ್ಯದ ದರ್ಶನ ಮಾಡಬೇಕೆಂದು ಭೌತ ಶಾಸ್ತ್ರಜ್ಞೆ ನಾನು ಅರ್ಥೈಸಿದ್ದರೆ, ಮನಸ್ಸಿನಲ್ಲಾಗುವ ವಿವಿಧ ಬದಲಾವಣೆಗಳನ್ನು "ಪಂಚರಂಗಿ" ಎಂದು ಇಮೇಜೆರಿಯಾಗಿ ಬಳಸಲಾಗಿದೆ ಎಂದು ಸಮಾಜ ಶಾಸ್ತ್ರಜ್ಞೆ ಅವಳು ಅರ್ಥೈಸಿದ್ದಳು. ಪರಮಾತ್ಮ ಚಿತ್ರಕ್ಕೂ ಇದೇ ವ್ಯಾಖ್ಯಾನವನ್ನು ಸ್ವಲ್ಪ ಮಟ್ಟಿಗೆ ಅಳವಡಿಸಿಕೊಳ್ಳಬಹುದು. ಪರಮಾತ್ಮ ಚಿತ್ರದಲ್ಲಿ ಗಟ್ಟಿ ಕಥೆ ಎಂಬುದು ಏನೂ ಇಲ್ಲ. ಅದೊಂದು Jigsaw puzzle  ತರಹ. ಪಜ಼ಲ್ಲಿನ ಎಲ್ಲಾ ಬಿಡಿ ಬಿಡಿ ಚೂರುಗಳನ್ನು ಒಟ್ಟು ಸೇರಿಸಿದರೆ ಅದೊಂದು abstract  ಭಾವನೆ ಕೊಡುತ್ತದೆಯೇ ಹೊರತು, ಇದೊಂದು ಕಥೆ ಎಂದು ಅನ್ನಿಸುವುದಿಲ್ಲ. ಅಧ್ಯಾತ್ಮದಲ್ಲಿ ಪರಮಾತ್ಮ ಎಂಬುದನ್ನು ಅವರು "abstract entity" ಎಂದು ಅರ್ಥೈಸಿ ಅದನ್ನೇ ಇಲ್ಲೂ ಅಳವಡಿಸಿದ್ದಾರಾ ? ಅದು ಗೊತ್ತಿಲ್ಲ. ಒಂದು ವೇಳೆ ಹಾಗಿಲ್ಲದಿದ್ದರೆ, ಈ ಚಿತ್ರವನ್ನು  ದೃಶ್ಯಗಳ ಕಲಾತ್ಮಕ ಜೋಡಣೆ ಎಂದಷ್ಟೇ ಹೇಳಬಹುದು.

ಯೋಗರಾಜ ಭಟ್ಟರಂಥಾ satirical  ನಿರ್ದೇಶಕರು ಪರಮಾತ್ಮನನ್ನೂ satirical  ಆಗಿಯೇ ನೋಡಿದ್ದಾರೆಂದು ನಾನು ಅಭಿಪ್ರಾಯ ಪಡುತ್ತೇನೆ. ಪರಮಾತ್ಮ ಪದದ ಬಗ್ಗೆ ಇರುವ ನಾನಾರ್ಥಗಳನ್ನು ಸಮಯೋಚಿತವಾಗಿ ಬಳಸುವಲ್ಲಿ ಯಶಸ್ವಿ ಆಗಿರುವ ಭಟ್ಟರು ಚಿತ್ರಕ್ಕೆ ಸಂಪೂರ್ಣವಾದ ಒಂದು ಅರ್ಥ ಕೊಡುವಲ್ಲಿ ಸೋತಿದ್ದಾರೆ. ಚಿತ್ರದ ಕಡೆಯಲ್ಲಿ ಭಟ್ಟರು "ಪರಮ" ಎನ್ನುವ ವ್ಯಕ್ತಿಯಲ್ಲಿ ತನ್ನ ಪತ್ನಿಯ ಆತ್ಮ ಸೇರಿ "ಪರಮಾತ್ಮ"ನಾದನು ಎಂದು ನಾವು ಭಾವಿಸಬೇಕೇ ಎಂಬ ಪ್ರಶ್ನೆಗೆ ಭಟ್ಟರೇ ಉತ್ತರಿಸಬೇಕು. ಟೈಂ ಪಾಸ್ ಆಯಾಮದಿಂದ ಈ ಚಿತ್ರವನ್ನು ನೋಡಿದರೆ ಇದು ಸಂಪೂರ್ಣ ಟೈಂ ಪಾಸೇ.

ಅಧ್ಯಾತ್ಮಿಕ ಆಯಾಮದಿಂದ ಪರಮಾತ್ಮ  ಚಿತ್ರವನ್ನು ನೋಡುವ ಪ್ರಯತ್ನ ಮಾಡಬಹುದೋ ಇಲ್ಲವೋ ಗೊತ್ತಿಲ್ಲ. ನನ್ನ ಬುದ್ಧಿಯನ್ನು ಉಪಯೋಗಿಸದೇ ಸರಿಸುಮಾರು ಆರುತಿಂಗಳು ಕಳೆದಿತ್ತಾದ್ದರಿಂದ  ಇರಲಾರದೇ ತಲೆಗೆ ಹುಳು ಬಿಟ್ಟುಕೊಂಡು ಯೋಚನೆ ಮಾಡತೊಡಗಿದೆ.ಏನು ಮಾಡುವುದು ? ರಾಮಕೃಷ್ಣಾಶ್ರಮದ ಎಸ್.ಎಲ್.ವಿ ಮತ್ತು ಬ್ರಾಹ್ಮಣರ ಕಾಫಿ ಕೇಂದ್ರದ ಇಡ್ಲಿ ವಡೆಗಳನ್ನು ತಿಂದು ಬೆಳೆದ ದೇಹ ! ಯೋಚನೆ ಮಾಡಿಯೇಬಿಟ್ಟಿತು ನನ್ನ ತಲೆಯೂ !!  ನನಗೆ ಹುಟ್ಟಿದ ಪ್ರಶ್ನೆಗಳಿವು:
೧.ಚಿತ್ರದಲ್ಲಿ ಪರಮಾತ್ಮ ಎಂಬ ಹೆಸರಿನ ವ್ಯಕ್ತಿ ತಾನೇನೇ ಸಾಧನೆ ಮಾಡಿದರೂ ತೃಪ್ತನಾಗಿ ಕಾಣದೇ ಇರುವುದು ಆನಂದ ಸ್ವರೂಪನಾದ ಪರಮಾತ್ಮನನ್ನು ನಿರಂತರವಾಗಿ ಹುಡುಕುವ ಸಂಕೇತವಾಗಿರಬಹುದೇ ?
೨."ಹುಟ್ಟೆಲ್ಲಿ ?" ಎಂದು ನಾಯಕಿ ಕೇಳುವ ಪ್ರಶ್ನೆಗೆ ನಾಯಕ " ಕೆ.ಸಿ ಜೆನರಲ್ ಆಸ್ಪತ್ರೆ" ಎಂದು ಉತ್ತರಿಸುತ್ತಾನೆ. ನಿಜವಾಗಿ ನಾಯಕಿ ದೋಣಿಯ ಹರಿಗೋಲು (ಹುಟ್ಟು) ಕೇಳುತ್ತಿರುತ್ತಾಳೆ. ಈ ದ್ವಂದ್ವಾರ್ಥವನ್ನು ವಿಸ್ತರಿಸಬಹುದಾದರೆ, ಐಹಿಕ ಮತ್ತು ಪಾರಮಾರ್ಥಿಕವಾಗಿ ಹುಟ್ಟು ಎಂಬ ಪದವನ್ನು ಇಲ್ಲಿ ಬಳಸಲಾಗಿದೆಯೇ ?
೩."ಕತ್ತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ " ಹಾಡು ಮೇಲ್ನೋಟಕ್ಕೆ ಹಾಸ್ಯಮಯವಾಗಿ ಕಂಡರೂ ನಾವು ನಮ್ಮ ಜೀವನದಲ್ಲಿ "Back up plans" ಇಟ್ಟುಕೊಂಡರೆ ಎಷ್ಟರ ಮಟ್ಟಿಗೆ ಅದು ಸಾಧು, ಸಮಂಜಸ ಮತ್ತು ನ್ಯಾಯಬದ್ಧ ಎಂಬ ನೈತಿಕ ಪ್ರಶ್ನೆಗಳನ್ನು ಏಳಿಸುವ ಹಾಡಾಗಿದೆ. ನಾವು ಮೋಹದಿಂದ ಅಷ್ಟು ಸುಲಭಕ್ಕೆ ಹೊರಬರಲಾರೆವು ಎಂಬ ಸಂಕೇತವನ್ನು ಭಟ್ಟರು ಈ ಹಾಡ ಮೂಲಕ ನೀಡಹೊರಟಿರುವರೇ ?
೪.ಪರಮಾತ್ಮನ ಸ್ನೇಹಿತರನ್ನು ಪರಮಾತ್ಮ ಎಂದಿಗೂ ಅವರ ಹೆಸರಿನಿಂದ ಕರೆಯದೇ, ಅವರ ಗುಣಸ್ವಭಾವಕ್ಕೆ ತಕ್ಕಂತೆ ಹೆಸರುಗಳನ್ನು ಇಟ್ಟಿರುವುದು ಗಮನಾರ್ಹ. "ಹೆಸರಲ್ಲೇನಿದೆ ? ಗುಣವು ಮನುಷ್ಯನ ನಿಜವಾದ ಹೆಸರು" ಎಂದು ಇದು ಸೂಚಿಸುತ್ತದೆಯೇ ?
೫.ಕಡೆಗೂ ಪರಮಾತ್ಮ ಯಾರ ಕೈಗೂ ಸಿಗದ ವಸ್ತು ಎಂದು ತೋರಿಸಲಿಕ್ಕೆ ಇಬ್ಬರು ನಾಯಕಿಯರನ್ನು ಇಟ್ಟು, ಒಬ್ಬಳು ಸತ್ತು ಮತ್ತೊಬ್ಬಳನ್ನು ಬೇರೊಬ್ಬರ ಜೊತೆ ಮದುವೆ ಮಾಡಿಸಿ ಪರಮಾತ್ಮ ಎಂದಿಗೂ ಒಬ್ಬನೇ ಎಂಬ ವಾಕ್ಯಕ್ಕೆ ಈ ತರಹ ಹೊಸ ಅರ್ಥವನ್ನು ನೀಡಲಾಗಿದೆಯೇ ?

ಹುಟ್ಟು-ಸಾವು, ಹಾಸ್ಯ- ಆಟ, ಕೋಪ-ಸವಾಲು,ಡುಡಿಮೆ-ನೆಲೆ, ಕಾಮ-ಪ್ರೇಮ, ತಂದೆ-ಮಗಳ ಸಂಬಂಧ, ಮಗಳ ಮದುವೆಯ ಸಮಯದಲ್ಲಿ ತಂದೆಯ ಮನಸ್ಸಲ್ಲಾಗುವ ತೊಳಲಾಟ ಎಲ್ಲವೂ ಸಾಮಾನ್ಯ. ಅದನ್ನು ಮೀರಿದವನು ಪರಮಾತ್ಮ ಎಂಬುದನ್ನು ಈ ಚಿತ್ರದಲ್ಲಿ ಅತಿ ಸೂಚ್ಯವಾಗಿ ತೋರಿಸುವ ಮೂಲಕ ಭಟ್ಟರು ತಮ್ಮ ವಿಶಿಷ್ಟ ಜಾಣ್ಮೆಯನ್ನು ಮೆರೆದಿದ್ದಾರೆ. ಹಾಡುಗಳು ಯಥಾಪ್ರಕಾರ ಅವರ Trump card ಆಗಿವೆ.

ನನಗೆ ಅರ್ಥವಾಗದ್ದು ಇಷ್ಟು:
೧. ECG report ಗಳ ಔಚಿತ್ಯ.
೨. ನಾಯಕಿಯ ನಿರಂತರ ನಗು.

ಚಿತ್ರಕ್ಕೆ ಇಷ್ಟೇನೆ  ಅರ್ಥಾನಾ...?

ಯಾವನಿಗೊತ್ತು.. ಯಾವನಿಗೊತ್ತು ?!


ಸಂಜು weds ಗೀತಾ

.....ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು,
ನನ್ನ ಎಲ್ಲ ಖುಶಿಯನ್ನು ಕೊಡುವೆ ನಿನ್ನ ವಶಕಿನ್ನು
ಮಳೆಯ ಹನಿ ಉರುಳೋ ದನಿ ಥರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ,
ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಎಂದೊ ಬ್ರಹ್ಮನು..

ಈ ಹಾಡು ಕೇಳಿದ ತಕ್ಷಣ ನಾನು ಈ ಚಿತ್ರ ನೋಡಲೇಬೇಕು ಅಂತ ನಿರ್ಧರಿಸಿದ್ದೆ .ಪ್ರಾಯಶಃ  ಚಿತ್ರವೊಂದರ  ಬಿಡುಗಡೆಯನ್ನು ನಾನು ಬಕಪಕ್ಷಿಯಂತೆ ನಿರೀಕ್ಷಿಸಿದ ಮೊದಲ ಚಿತ್ರ ಅಂದರೆ ಇದೇನೆ.ಈ ಹಾಡಿನಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಎಷ್ಟು ಪ್ರೀತಿಸುತ್ತಾನೆ ಮತ್ತು ಅವಳಿಗಾಗಿ ಏನೆಲ್ಲಾ ಮಾಡಬಲ್ಲನು ಎಂದು ಹೇಳುವಂತಹ ಆದರ್ಶ ಪ್ರೇಮಿಯೊಬ್ಬನನ್ನು ಚಿತ್ರಗಳಲ್ಲಿ ಮಾತ್ರ ನೋಡಲು ಸಾಧ್ಯ ನೋಡಿ ;) ಅದಕ್ಕೆ, ಆ ಪ್ರೇಮಿಯ ಆದರ್ಶಕ್ಕೆ, ಈ ಮನಮುಟ್ಟುವ ಸಾಹಿತ್ಯಕ್ಕೆ ನಾನು ಮನಸೋತು ಕಿಟ್ಟಿಯ lover  boy  ಅವತಾರನ್ನು ನೋಡಲು ಕಾಯುತ್ತಿದ್ದೆ. ನಿನ್ನೆ ಈ ಚಿತ್ರವನ್ನು ನೋಡಿದ್ದಾಯ್ತು. :)

ಈ ಚಿತ್ರವನ್ನು ಎರಡು ಆಯಾಮಗಳಿಂದ ನೋಡಬಹುದು.Rather,  ನಾನು ಎರಡು ಆಯಾಮಗಳಲ್ಲಿ ನೋಡಿದ್ದೇನೆ.

೧.ಚಿತ್ರ -ಮನರಂಜನೆಯ ಆಯಾಮದಲ್ಲಿ.

ಆರಂಭ ಚೆನ್ನಾಗಿದೆ. ಹದಿಹರೆಯದ ಯುವಕನಾಗಿ ಕಿಟ್ಟಿ ನೋಡಲು ಚೆನ್ನಾಗಿ ಕಾಣುತ್ತಾರೆ. ಆದರೆ ಕಿಟ್ಟಿ ಚಿತ್ರದುದ್ದಕ್ಕೂ ನಿರ್ಭಾವುಕವಾಗಿಯೇ ಇದ್ದಾರೆ.ಭಾವನೆಯ ಉತ್ತುಂಗವನ್ನು ಅಪೇಕ್ಷಿಸುವ ಈ ಕಥಾ ಹಂದರಕ್ಕೆ ಇಲ್ಲಿ ನ್ಯಾಯ ಸಲ್ಲಿಸಿಲ್ಲ ಅವರು.   ಸವಾರಿ ಚಿತ್ರದಲ್ಲಿ ಕಂಡ ಅವರ ನಟನೆಗೆ ಹೋಲಿಸಿದರೆ ಇಲ್ಲಿ ಅವರ ನಟನೆ ಏನೂ ಇಲ್ಲ. ಅವರ ಧ್ವನಿಯಲ್ಲಿ ಸಹ ಏನೂ ಏರಿಳಿತಗಳಿಲ್ಲ. ಅಷ್ಟು ನಿರ್ಭಾವುಕವಾಗಿ, ನಿರ್ಲಿಪ್ತವಾಗಿ ವಾರ್ತೆಗಳನ್ನ ಓದುವವರು ಮಾತಾಡಬೇಕು. ಆದರೆ ಇಲ್ಲಿ...

ಚಿತ್ರದ ಕೇಂದ್ರ ಬಿಂದು ರಮ್ಯ. ಇದೇ ಮೊಟ್ಟ ಮೊದಲನೆ ಬಾರಿಗೆ, ನನಗೆ ಅವರ ನಟನೆ ಇಷ್ಟವಾಯ್ತು. ಅವರ ನಟನಾ ಕಲೆಗೆ ಸವಾಲೊಡ್ಡುವ ಈ ಪಾತ್ರವನ್ನು ರಮ್ಯಾ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. ಸವಾಲಿಗೆ ತಕ್ಕ ಜವಾಬು ನೀಡಿದ್ದಾರೆ ಸಹ.ಪ್ರಬುದ್ಧ ಅಭಿನಯದಲ್ಲಿ ಅವರು ಎಲ್ಲರ ಮನಗೆಲ್ಲುತ್ತಾರೆ.

ಶರಣ್, ತಬಲಾನಾಣಿ,ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಕಾಮಿಡಿಯಲ್ಲಿ ಮಿಂಚಿದರೆ, ರಂಗಾಯಣ ರಘು ಪೋಷಕ ಪಾತ್ರದಲ್ಲಿ ತಮ್ಮದೇ ವಿಭಿನ್ನ ಛಾಪು ಒತ್ತಿದ್ದಾರೆ. ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣುವ ಅರುಣ್ ಸಾಗರ್ ಅವರ ಬಗ್ಗೆ ಇಲ್ಲಿ ಹೇಳಲೇ ಬೇಕು.ವಿಕೃತ ಕಾಮಿಯಾಗಿ ಅವರ ಅಭಿನಯ ವಿಭಿನ್ನ ಮತ್ತು ವಿಶೇಷವಾಗಿದೆ.

ಕಥೆಯು ಪೂರ್ವಾರ್ಧದಲ್ಲಿ ಸತ್ವಯುತವಾಗಿದ್ದರೂ ಉತ್ತರಾರ್ಧದಲ್ಲಿ  ಹಳಿ ತಪ್ಪುತ್ತದೆ. ಭಾವನೆಗಳನ್ನು ಪ್ರಭಾವಶಾಲಿಯಾಗಿ ಬಿಂಬಿಸುವಲ್ಲಿ ಇಲ್ಲಿ ಕಿಟ್ಟಿ ಮುಗ್ಗರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹೆಸರಿನಲ್ಲಿ ಜೈಲಿನಲ್ಲಿ  ಹಾಡುವ ಐಟಂ ಸಾಂಗಿನ ಅಗತ್ಯವನ್ನು ಇಲ್ಲಿ ಪ್ರಶ್ನಿಸಲೇ ಬೇಕು. ಅದು ಚಿತ್ರಕ್ಕೆ ಕಾಮಿಕ್ ರಿಲೀಫ್ ಕೊಡಲಿಕ್ಕಾಗಿ ಮಾಡಿದ್ದಾ, ಅಥವಾ ಜೆಸ್ಸಿ ಗಿಫ್ಟ್ ಅವರ ಸಂಗೀತ ಸಂಯೋಜನೆಯಲ್ಲಿ ಅವರ ಕಂಠದಲ್ಲಿ ಒಂದು ಹಾಡು ಇರಲೇಬೇಕು ಅಂತ ಮಾಡಿದ್ದಾ ಗೊತ್ತಾಗಲಿಲ್ಲ.  ಅಂತ್ಯ ಪಕ್ಕಾ stereotype ಅನ್ನಿಸದಿದ್ದರೂ, ಹೇಳಿಕೊಳ್ಳುವಂಥಾ "ಡಿಫರೆಂಟ್" ಆಗಿ ಏನು ಇಲ್ಲ.ಪ್ರೇಕ್ಷಕ ಚಿತ್ರದ ಅಂತ್ಯವನ್ನು ಊಹಿಸಬಲ್ಲನು.

ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ cinematography.ಮಳೆ, ಮಡಿಕೇರಿ, ವಿರಾಜಪೇಟೆ, ಸಕಲೇಶಪುರ, ಇವು ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾಗುತ್ತದೆ. ಹಾಡುಗಳ ಸಾಹಿತ್ಯ, ಸಂಗೀತ ಮತ್ತು ಚಿತ್ರೀಕರಣ ಪರಸ್ಪರ ಪೂರಕವಾಗಿದ್ದು, ಕಥೆಯ ನಿರೂಪಣೆಯಲ್ಲಿ ಕಾಣುವ  ದೌರ್ಬಲ್ಯವನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗಿದೆ.  ಗೀತಸಾಹಿತ್ಯಕ್ಕೆ ನನ್ನ ಎರಡು ಥಂಬ್ಸ್ ಅಪ್, :)

ಒಟ್ಟಿನಲ್ಲಿ ಇದೊಂದು ಸೆಂಟಿಮೆಂಟಲ್ ಮತ್ತು ಸೀರಿಯಸ್ ಚಿತ್ರ.

೨. ಚಿತ್ರ-ಸಾಮಾಜಿಕ ಸಂದೇಶ ನೀಡುವ ಆಯಾಮಯಲ್ಲಿ

ಈ ಚಿತ್ರದ ಮುಖ್ಯ ವಸ್ತು ವಿಕೃತ ಕಾಮ,ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಮತ್ತು ಅದರಿಂದ ವಿಚಲಿತವಾಗುವ ಅವರ ಮನಸ್ಸು. ಬಹುತೇಕ ಹೆಣ್ಣು ಮಕ್ಕಳು ಇದಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೇನೋ ಒಳಗಾಗುವುದುಂಟು. ಇದಕ್ಕೆ ಹಳ್ಳಿ ದಿಲ್ಲಿಯ ಭೇದವಿಲ್ಲ. ವಿಕೃತಕಾಮಿಗಳಿಗೆ ಅಂದಿನಿಂದ ಇಂದಿನ ವರೆಗೂ ಎಂದು ಕೊರತೆ ಇಲ್ಲ.ಇದರ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು, ಮತ್ತು ಗಾಬರಿಗೊಂಡ ಮನಗಳಿಗೆ ಸಾಂತ್ವನ ಮತ್ತು ಅತ್ಯಾಚಾರವನ್ನು ಧಿಕ್ಕರಿಸಿ ನಿಲ್ಲುವ ಧೈರ್ಯ ತುಂಬಲು ನಮ್ಮ ಸಮಾಜ ಯಾಕೋ ಹಿಂದು ಮುಂದು ನೋಡಿ,ಆ ಮಕ್ಕಳನ್ನು ವೃಥಾ ಹೀಗಳಿದು, ಅಂಥಾ ಹೆಣ್ಣು ಮಕ್ಕಳನ್ನು ಬೆರೆಯದೇ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮಟ್ಟಿಗೆ ಇಳಿದಿರುವುದು  ದುರಂತ. ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ,ಪಾಲನೆಯಲ್ಲಿ, ತಂದೆ ತಾಯಿಗಳು ಎಷ್ಟೇ ಎಚ್ಚರ ವಹಿಸಿದರೂ ಸಾಲದು. ಈ ನಿಟ್ಟಿನಲ್ಲಿ ಈ ಚಿತ್ರ ಪಾಲಕರಿಗೆ ಎಚ್ಚರವಾಗಿರುವಂತೆ ಒಂದು ಸೂಕ್ಷ್ಮ ಸಂದೇಶ ನೀಡಿದೆ. ಇದು ಚಿತ್ರದ ಪ್ಲಸ್ ಪಾಯಿಂಟ್.ಆದರೆ ಈ ಚಿತ್ರ ಸಮಸ್ಯೆಯನ್ನು ಮಾತ್ರ ವೈಭವೀಕರಿಸಿ ಅದಕ್ಕೆ ಸೂಕ್ತ ಪರಿಹಾರ ತೋರಿಸುವಲ್ಲಿ ವಿಫಲವಾಗಿದೆ.ಸಮಾಜಕ್ಕೆ ಸಂದೇಶ ಕೊಡಬೇಕೆಂದು ನಿರ್ದೇಶಕ ನಾಗಶೇಖರ್ ನಿರ್ಧರಿಸಿದ್ದರೆ, ಅವರು ಕಿಟ್ಟಿಯ ಪಾತ್ರವನ್ನು  ಈ ನಿಟ್ಟಿನಲ್ಲಿ ಉಪಯೋಗಿಸಬಹುದಿತ್ತು. ಈ ಪಾತ್ರ ಆದರ್ಶ ಪ್ರೇಮಿಯೊಬ್ಬನನ್ನು ಪ್ರತಿಬಿಂಬಿಸಬೇಕಿದ್ದರೆ, ಕಿಟ್ಟಿ ರಮ್ಯಾಗೆ ಇನ್ನೂ ಬಲವಾದ ಆಸರೆಯನ್ನು ಕೇವಲ ಹಾಡಿನಲ್ಲಿ ಅಲ್ಲದೇ, ಪ್ರೇಮದ ಕಲ್ಪನೆಯ ಮಾತಿನಲ್ಲಿ ಮಾತ್ರವಲ್ಲದೇ, ಅವಳಿಗೆ ಸಾಂತ್ವನದ ಮೂಲಕವೂ ನೀಡಬಹುದಿತ್ತು. ಚಿತ್ರದಲ್ಲಿ ಮೊದಲೆರಡರ ಬಗ್ಗೆ ಹೆಚ್ಚು ಆಸ್ಥೆ ವಹಿಸಲಾಗಿದ್ದು, ಕಿಟ್ಟಿ ರಮ್ಯಾಳ ಜೀವನದಲ್ಲಿ ನಡೆದ ಈ ಘಟನೆಯನ್ನು casual  ಆಗಿ ಸ್ವೀಕರಿಸಿದ ಹಾಗೆ ಇಲ್ಲಿ ಪ್ರೇಕ್ಷಕನಿಗೆ ಭಾಸವಾಗುತ್ತದೆ.  Atleast,  ನನಗೆ ಹಾಗನ್ನಿಸಿದೆ. ಕಾರಣ, ಚಿತ್ರದಲ್ಲೆಲ್ಲೂ ಕಾಣದ ಸಾಂತ್ವನದ ಮಾತು ಮತ್ತು ಕಿಟ್ಟಿಯ ನಿರ್ಭಾವುಕ ಅಭಿನಯ.ರಮ್ಯಾಳ ಸ್ಥಿತಿ ಹೇಗಿದ್ದರೂ ಅವಳನ್ನು ಸ್ವೀಕರಿಸುವ ಕಿಟ್ಟಿಯ ಹೃದಯ ವೈಶಾಲ್ಯತೆಯ ಬಗ್ಗೆ ಎರಡು ಮಾತಿಲ್ಲ, ಆದರೆ, ಗಂಡು ಮಕ್ಕಳು ಶೋಷಿತ ಹೆಣ್ಣು ಮಕ್ಕಳ ಬೆಂಬಲಕ್ಕೆ ನಿಂತಂತೆ, ಅದರ ವಿರುದ್ಧ ಧ್ವನಿ ಎತ್ತಿದಂತೆ  ಕಿಟ್ಟಿಯ ಪಾತ್ರವಿದ್ದಿದ್ದರೆ, ಈ ಚಿತ್ರಕ್ಕೆ ಬೇರೆಯದೇ ತಿರುವು ಸಿಕ್ಕಿರುತ್ತಿತ್ತು. ಅದನ್ನು ಬಿಟ್ಟು ಕಿಟ್ಟಿ ಖಳನಾಯಕನ ಕೊಲೆ ಮಾಡಿ ಬಿಸಿರಕ್ತದ ಕೋಪದ ಆವೇಶವನ್ನಷ್ಟೇ ತೋರಿಸಿದ್ದಾರೆ. ಕಿಟ್ಟಿಯ ಪಾತ್ರ ಲವರ್ ಬಾಯ್ ಇಮೇಜನ್ನು ಮಾತ್ರ ಹೊಂದಿರದೇ  matured men ಅಂತಹ ಪಾತ್ರವಾಗಿದ್ದಿದ್ದರೆ ಈ ಚಿತ್ರಕ್ಕೆ ಮತ್ತಷ್ಟು ತೂಕ ಬಂದಿರುತ್ತಿತ್ತು.ಪ್ರೀತಿ ಕುರುಡು,ಕ್ಷಣಿಕ ಕೋಪ, ಆವೇಶ, ಅವೆಲ್ಲ ಏನೇ ಇದ್ದರೂ, ಅದಷ್ಟೇ ಜೀವನ ಅಲ್ಲವಲ್ಲ !

ಚಿತ್ರ ನೋಡಿ ಹೊರಗೆ ಬಂದಮೇಲೆ ನನಗನ್ನಿಸಿದ್ದು ಇಷ್ಟು:

೧.ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ವಿರುದ್ಧದ ಹೋರಾಟಕ್ಕೆ ಸಿಗದ ನೆರವಿನ ಬಗ್ಗೆ ಬೇಜಾರು. ಸಾವಿರಾರು ಜನ ಇಂಥವುಗಳಲ್ಲಿ ಬೆಂದು ಹೋಗಿದ್ದಾರೆ. ಇದಕ್ಕೆ ಕೊನೆ ಎಂದು ?
೨.Why is there no proper sex education at the right time in this country ? ನಾವು ನಮ್ಮ ಮಕ್ಕಳೊಟ್ಟಿಗೆ ಈ ವಿಷಯದ ಬಗ್ಗೆ ಮುಕ್ತವಾಗಿ ಮಾತಾಡಲು ಹಿಂಜರಿಯುತ್ತಿದ್ದೇವಾ ?
೩.Contrasting cultures and cultural differences.  ಪ್ರಸ್ತುತ ಸಮಾಜ ಪೂರ್ವ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಹರಿದು ಹಂಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ sex before marriage, live in relationships ತೀರಾ ಸಾಮಾನ್ಯ ಅನಿಸಿದರೆ, ಇಲ್ಲಿ ಅವುಗಳಿಗೆ ತಿರಸ್ಕಾರಯುತ ಧಿಕ್ಕಾರವಿದೆ, ಇಲ್ಲವೆಂದರೆ ಅನಿವಾರ್ಯದ ಅನುಮೋದನೆ ಇದೆ. Are we unable to strike a balance between these two opposite cultures ? Are we not evolved intellectually to bring in a new thought process, a cultural evolution ? These might sound too much, aren't we educated enough to educate our children and talk to them about this openly ? We, the harbingers of next generation have a serious role to play in this. ನನಗನ್ನಿಸಿದ್ದು ಇಷ್ಟು. ಮಕ್ಕಳಿಗೆ ಪ್ರಯಾವಾಗುತ್ತಾ ಆಗಬಹುದಾದ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಿ, ವಿಪರೀತದ ಪರಿಸ್ಥಿತಿಗಳಲ್ಲಿ ಅವರು ಅನಾಹುತದಿಂದ ತಪ್ಪಿಸಿಕೊಳ್ಳುವ ದಾರಿಯಾದರೂ ತಿಳಿಸಿರಬೇಕು.  ಏನು ಮಾಡಬೇಕು, ಮತ್ತು ಏನು ಮಾಡಬಾರದು ಅನ್ನುವುದರ ಬಗ್ಗೆಯಾದರೂ ಮಕ್ಕಳಿಗೆ ತಿಳುವಳಿಕೆ ನೀಡಬಹುದಲ್ಲವೇ ?

ಬೇಲೂರು ಹಳೆಬೀಡಿನ ಶಿಲ್ಪಗಳು ಯಾಕೋ ಬೇರೆಯದೇ ಉದ್ದೇಶಕ್ಕೆ ಕೆತ್ತಲ್ಪಟ್ಟಿವೆಯಾ ಅಂತ ಅನಿಸಿತು. ಸೌಂದರ್ಯ ಮತ್ತು ಕಲಾಕೌಶಲ್ಯ ಇರಲಿ, Was that an indirect approach to sex education those days ?

ಸೂಪರ್

ಉಪೇಂದ್ರ ನಿರ್ದೇಶಿಸುವ ಚಿತ್ರ ಬುದ್ಧಿವಂತರಿಗೆ ಮಾತ್ರ ಅಂತ ನಾನು "ಶ್ !!!!!!!!" ಕಾಲದಿಂದಲೂ ಕೇಳುತ್ತಿದ್ದೆ. "ಶ್ !!","ಏ", "ಓಂ", "ಉಪೇಂದ್ರ",ಇದ್ಯಾವುದನ್ನು ನಾನು ನೋಡಲಿಲ್ಲ.ನನ್ನ ಬುದ್ಧಿವಂತಿಕೆಗೆ ಬಗ್ಗೆ ನನಗೆ ನಂಬಿಕೆ ಇರ್ಲಿಲ್ಲ ಅಂತ ಅಲ್ಲ, ನೋಡಕ್ಕೆ ಸಮಯ ಒದಗಿ ಬಂದಿರಲಿಲ್ಲ. 

ಸೂಪರ್ ರಿಲೀಸ್ ಆದಾಗಲೂ ನನಗೆ ಇದೊಂದು ನೋಡಲೇಬೇಕಾದ ಸಿನೆಮಾ ಅಂತ  ಅನ್ನಿಸಿರಲಿಲ್ಲ.ನಾನು ನನ್ನ ಲೋಕದಲ್ಲಿ ಅದೆಷ್ಟು ಮುಳುಗಿ ಹೋಗಿದ್ದೆನೆಂದರೆ, ಆ ಮೂವಿಯ ಟ್ರೈಲರ್ ಆಗಲೀ, ಪೋಸ್ಟರ್ ಆಗಲಿ ಕೂಡಾ ಶನಿವಾರ, ೧೮.೧೨.೧೦ ವರೆಗೂ ನಾನು ನೋಡಿರಲಿಲ್ಲ. ನನ್ನನ್ನು ಈ ಚಿತ್ರ ನೋಡುವಂತೆ ಮಾಡಿದ್ದು, ಈ ಚಿತ್ರದ ಪೋಸ್ಟರ್. ಪೋಸ್ಟರ್ ಮೇಕಿಂಗ್ ಚೆನ್ನಾಗಿದೆ, ಆದರೆ ಹೆಸರು ಬಳಸದೇ ಸೈನ್ ಲ್ಯಾಂಗ್ವೇಜಿನಲ್ಲಿ ನೋಡುಗರನ್ನು ಟಾಕೀಸಿಗೆ ಸೆಳೆದ ಪ್ರಚಾರದ ಗಿಮ್ಮಿಕ್ ಸೂಪರ್.ಆ ಸಿಂಬಲ್ಲು ಸೂಪರ್ ಅಂತ ನೀವು ತಿಳಿದಿದರೆ, ಉಪ್ಪಿ " ನಿಮ್ಮ ಒಂದೇ ಕಣ್ಣನ್ನು ಆ ಸೊನ್ನೆಯಲ್ಲಿಟ್ಟು ನೋಡಿ ಇಷ್ಟೇ ಪ್ರಪಂಚ ಅಂದುಕೋಬೇಡ್ರೋ ಮುಠ್ಠಾಳರಾ ! " ಅಂತ ಉಪ್ಪಿ ಅಂತಿದಾನೇನೋ ಅಂತ ನನಗನ್ನಿಸಿ ನಾನು ಆ ಚಿತ್ರ ನೋಡಬೇಕೆಂದು ನಿರ್ಧರಿಸಿದೆ.

ನಾನು ಸಾಮಾನ್ಯವಾಗಿ ಚಿತ್ರದ ರಿವ್ಯೂ ಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೇ ಚಿತ್ರವನ್ನು ಎಂದಾದರೂ ನೋಡಿದಾಗ ನನ್ನ ಅಭಿಪ್ರಾಯವನ್ನು ಬೆಳೆಸಿಕೊಳ್ಳುವಂಥವಳು. ಈ ಚಿತ್ರದ ರಿವ್ಯೂವನ್ನು ನಾನು ಸೀರಿಯಸ್ಸಾಗಿ ತೆಗೆದುಕೊಳ್ಳಲು ಕಾರಣ ಬಹಳಷ್ಟು ರಿವ್ಯೂಗಳಲ್ಲಿ ಕಂಡುಬಂದ, ಕೇಳಿಬಂದ "ಚಿತ್ರ ಅರ್ಥ ಆಗಲಿಲ್ಲ !" ಅನ್ನೋ ವಾಕ್ಯ.ಉಪೇಂದ್ರ "ಏ" ಚಿತ್ರದ ಟ್ಯಾಗ್ ಲೈನನ್ನು  "ಬುದ್ಧಿವಂತರಿಗೆ ಮಾತ್ರ" ಅಂತ ಹಾಕಿ ಜನರ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚಲೋ, ಅಥವ ಥಿಯೇಟರಿಗೆ ಜನರನ್ನು ಸೆಳೆಯಲೋ ಪ್ರಯತ್ನಿಸಿರಬಹುದು. ಅದಾದ ನಂತರ ಬಂದ ಚಿತ್ರಗಳಲ್ಲಿ implicit  ಆಗಿ ಈ ಕಂಡಿಷನ್ ಅನ್ನು ಕಾಣಬಹುದು ಎಂದು ನನ್ನ ಬಳಗದ ಸೋ ಕಾಲ್ಡ್ ಮೂವಿ ಬಫ್ ಗಳು ಅಪ್ಪಣೆಗೈದಿದ್ದರು. ಈ ಹಿಂದೆ ಕಾಡದ ಪ್ರಶ್ನೆ ನನ್ನನ್ನು ಈಗ ಕಾಡಲು ಶುರುವಾಯ್ತು.ಮನರಂಜನೆಯನ್ನೇ ಮುಖ್ಯವಾಗಿರಿಸಿಕೊಂಡ ಸಿನಿಮಾಧ್ಯಮದಲ್ಲಿ ಅರ್ಥ ತಾತ್ಪರ್ಯಗಳನ್ನು ಹುಡುಕುವುದು ಸಾಧುವೇ ಎನ್ನುವುದು ನನ್ನ ಪ್ರಶ್ನೆ. ಚಿತ್ರ ಅರ್ಥವಾಗುವಂತಹ ಸಂದೇಶ ಕೊಟ್ಟರೆ ಸಂತೋಷ. ಇಲ್ಲ ಅಂದರೆ ಬೇಜಾರು ಕಳಿಸಿದರೂ ಓಕೆ, ಅರ್ಥ, ತಾತ್ಪರ್ಯ, ಭಾವಾರ್ಥ,ಅನರ್ಥ ಅಪಾರ್ಥಗಳು ಯಾಕೆ ?!

ಏನಾದರೂ ಆಗಲಿ, ಚಿತ್ರ ಅರ್ಥ ಆಗತ್ತೋ ಇಲ್ಲವೋ ನೋಡಿಯೇ ಬಿಡೋಣ  ಎಂದು ನಿನ್ನೆ ಸೂಪರ್ ಚಿತ್ರದ ವೀಕ್ಷಣೆಗೆ ಮುಹೂರ್ತ ಫಿಕ್ಸ್ ಮಾಡಿ ಚಿತ್ರ ನೋಡಿಬಂದದ್ದಾಯ್ತು.ಇದು ನಾನು ನೋಡಿರುವ ಉಪ್ಪಿಯ ಡೈರೆಕ್ಷನ್ ಇರುವ ಮೊದಲ ಚಿತ್ರ.ಚಿತ್ರ ಅರ್ಥವಾಗಿಯೇ ಆಗುತ್ತದೆ ಅಥವಾ ಆಗುವುದಿಲ್ಲ ಎಂಬ ಯಾವುದೇ ಪೂರ್ವಗ್ರಹಗಳನ್ನು ಇಟ್ಟುಕೊಳ್ಳದೇ, ನನಗೆ ಅರ್ಥವಾಗುವುದೇ ಎಂಬ ಕುತೂಹಲವನ್ನಷ್ಟೇ ಇಟ್ಟುಕೊಂಡು ನಾನು ಚಿತ್ರವನ್ನು ವೀಕ್ಷಿಸಿದೆ.ನಾನು ಚಿತ್ರದೊಟ್ಟಿಗೆ ಉಪೇಂದ್ರನನ್ನೂ ಅನಲೈಸ್ ಮಾಡಿದ್ದೀನಿ ಅನ್ಸತ್ತೆ. ಗೊತ್ತಿಲ್ಲ :)

ಇವಕ್ಕೆ ಥಂಬ್ಸ್ ಅಪ್:

೧.ಟೈಟಲ್ ಕಾರ್ಡಿನಲ್ಲಿ ವ್ಯಕ್ತಿ ಪರಿಚಯದ ಶೈಲಿ. ನೈಸ್ ಅಷ್ಟೇ. ಯಾಕಂದರೆ, ಇದನ್ನು ನಮ್ಮ ಮೆಗಾಸೀರಿಯಲ್ ಗಳಿಗೂ ಇತ್ತೀಚೆಗೆ ಅಳವಡಿಸಿದ್ದಾರೆ. ದೊಡ್ಡ ಪರದೆಯಲ್ಲಿ ಇದು ಇನ್ನೂ ಚೆನ್ನಾಗಿ ಕಂಡಿದೆ ಎಂದಷ್ಟೇ ಹೇಳಬಹುದು.ಉಪೇಂದ್ರನನ್ನು ನೋಡಿದರೆ ನನಗೆ ಅವನು extremely satirical ಮನುಷ್ಯ ಅನ್ನಿಸಿತು. ಚಿಂದಿ ಆಯುವವನ ಸ್ಟೈಲ್ ನಲ್ಲಿ ಬಂದ ಅವನ ಇಂಟ್ರೋ, ಅವನದ್ದೇ ಶೈಲಿಯಲ್ಲಿ ಹೇಳಬೇಕೆಂದರೆ, " ಜೀವನದಲ್ಲಿ ನೀವೇನೇ ಕಿಸಿದ್ರೂ ಕಡೆಗೆ ಎಲ್ಲೋ ಏನೋ ಹುಡುಕ್ಕೊಂಡು ಏನಾದ್ರು ಆಯ್ಕೊಳಕ್ಕೆ ಕಾಯ್ತಿರ್ತಿರಾ, ಸಿಕ್ಕಿದ್ದೆಲ್ಲಾ ಗೆಬುಕ್ಕೊತಿರ್ತಿರಾ " ಅನ್ನೋ ಸಂದೇಶದ ರವಾನೆಯ ಸೂಕ್ಷ್ಮ ರೀತಿ ಸೂಪರ್.

೨. ನಾನು ಕಂಡ ಇನ್ನೊಬ್ಬ satirical  ವ್ಯಕ್ತಿ ಯೋಗರಾಜ ಭಟ್. ಪಂಚರಂಗಿಯಲ್ಲಿ ಅವರ ಧ್ವನಿ ಮತ್ತು ಡೈರೆಕ್ಷನ್ ನ ಶೈಲಿ ನೋಡಿ, ಹಾಗನ್ನಿಸಿತ್ತು.ಉಪೇಂದ್ರ ಅವರ ಧ್ವನಿಯನ್ನೇ  ಚಿತ್ರದ ಆರಂಭದಲ್ಲಿ ಬಳಸಿಕೊಂಡು ಈ ಚಿತ್ರವನ್ನು satirical angle  ಇಂದ ನೋಡಬೇಕೆಂದು ಸೂಕ್ಷ್ಮವಾಗಿ ತಿಳಿಸಿದ್ದಾನೆ ಅನ್ನಿಸಿತು. ಅವನು ಉಪಯೋಗಿಸಿದ ಲಾಜಿಕ್ ಸೂಪರ್.ನಾವು ನಮ್ಮ ಚರಿತ್ರೆಯ ಬಗ್ಗೆ ಕೊಚ್ಚಿಕೊಳ್ಳೋದ್ರಲ್ಲಿ ನಿಪುಣರೇ ಹೊರತು, ನಮ್ಮಲ್ಲಿ ಆ ಆವೇಶ, ನಿಜವಾದ ಭಕ್ತಿ ಎಲ್ಲಿದೆ ಅಂತ "ಲೈಫು ಇಷ್ಟೇನೆ" ಭಟ್ಟರ ವಿಭಿನ್ನ ವಿಶಿಷ್ಟ ಶೈಲಿಯಲ್ಲಿ ಹೇಳಿಸಿರುವ ರೀತಿ ಸೂಪರ್.

೩. ಮೇಕಿಂಗ್ ಅದ್ದೂರಿಯಾಗಿದೆ.ನೈಸ್, ಬಟ್ ನಾಟ್ ಸೂಪರ್. ಅಲ್ಲಲ್ಲಿ ಸ್ವಲ್ಪ ದುಡ್ಡುಳಿಸಬಹುದಿತ್ತು. ಇರ್ಲಿ.

೪. ಆಂಗ್ಲರಿಗೆ ಸರಿಯಾಗಿ, ಸಂಪದ್ಭರಿತವಾಗಿ ಅವಮಾನ ಮಾಡಿದ್ದಾನೆ. ಪಕ್ಕಾ ದೇಶಭಕ್ತರಿಗೆ ಇದು ಸಂತೋಷ ತರುತ್ತದೆ. ನನಗೂ ತಂದಿದೆ.

೫.  ಭಾರತೀಯರಿಗೆ ಶಾಲಲ್ಲಿ ಸುತ್ತಿ ಹೀನಾಮಾನ ಬೈದಿರುವ ರೀತಿಗೆ ನನ್ನದು ಸಿಳ್ಳೆ ಚಪ್ಪಾಳೆಗಳಿವೆ. (ಗಾಬರಿ ಆಗಬೇಡಿ, ನಾನು ಸಿಳ್ಳೆ ಹಾಕಿಲ್ಲ :) ಇಲ್ಲಿ ಬರೆಯುತ್ತಿದ್ದೇನೆ ಅಷ್ಟೇ) ನಾನೆಂಥಾ ಭಾರತೀಯಳು ಎಂದು ನೀವು ನನ್ನೊಟ್ಟಿಗೆ ವಾಗ್ಯುದ್ಧಕ್ಕೆ ಇಳಿಯುವ ಮುನ್ನ ನಾನು ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತೇನೆ.

ನಾವು ಬೇಕಿಲ್ಲದ ಕಡೆ ಅಹಿಂಸಾವಾದಿಗಳು, ಬೇಕಿಲ್ಲದ ಕಡೆ ಹಿಂಸಾಚಾರಿಗಳು, ಬೇಕಿಲ್ಲದ ಕಡೆ ಮಹಾ ಒಳ್ಳೆಯವರು, ಮತ್ತು ದೇಶದ ಹೊರಗೆ ದೇಶಭಕ್ತರು. ಇದನ್ನ ಎದುರಿಗೇ ಇದ್ದದ್ದನ್ನು ಇದ್ದ ಹಾಗೆ ಹೇಳಿ ನೋಡಿದರೆ ಎಲ್ಲರೂ "ಹೌದು, ನಾವಿರೋದೇ ಹೀಗೆ" ಅನ್ನುವ ನಿರ್ಲಿಪ್ತ, ನಿರ್ಭಾವ ಧೋರಣೆ ತೋರಿಸುವಂಥವರು ನಾವು. ಶಾಲಲ್ಲಿ ಸುತ್ತಿ ಹೊಡೆದರೆ ಅದು ಹೆಂಗೋಪಾ,  ನಮಗೆ ಸ್ವಲ್ಪ ಹೆಚ್ಚು ಅವಮಾನ ಆಗುತ್ತದೆ. ನಾವು ಹುಬ್ಬು ಗಂಟಿಡುತ್ತೇವೆ, "I dont like it" ಅಂತ ಉಪೇಂದ್ರನ ಸ್ಟೈಲಲ್ಲೇ ಹೇಳುತ್ತೇವೆ, ಮತ್ತು ಸಾಧ್ಯವಾದರೆ  ಬ್ಲಾಗುತ್ತೇವೆ :D. ಆದರೆ, ಇಲ್ಲಿ ಉಪ್ಪಿ ಗೆಲ್ಲುತ್ತಾನೆ ! ಅವನಿಗೆ " ನಾವು ಹೋಪ್ಲೆಸ್ ಜನ" ಅಂತ ಅರಿತುಕೊಳ್ಳುವುದು ಬೇಕಾಗಿರತ್ತೆ. ನಾವು ತಪ್ಪು ಮಾಡಿರುವ ನಿಜ ನಮಗೆ ಅರಿವಾದಗಲೇನೆ ನಮಗೆ ಕೋಪ ಬರುವುದು ನೋಡಿ! ಹಂಗಾದರೂ ನಮಗೆ ಸಂದೇಶ ತಲುಪಿರುತ್ತದೆ.  ಅವನಿಗೆ, ಚಿತ್ರದ ಗೆಲುವಿಗೆ ಅಷ್ಟು ಸಾಕು. ಉಪೇಂದ್ರನ ಈ strategy  ಸೂಪರ್.ಅವನ್ನದ್ದೇ ಸ್ಟೈಲಲ್ಲಿ, "ನನ್ ಮಕ್ಳಾ...ಯಾಕ್ರೋ ಹಿಂಗ್ ಹಾಳಾಗೋಗಿದಿರಾ ? " ಅಂತ ಸಿಂಗಲ್ ಲೈನಲ್ಲಿ ಕೇಳಿದ್ದರೆ ಜನ ಇಹಿಹಿಹಿ ಅಂತ ಕಿಸಿದಿರೋರು. ಚಪ್ಪಾಳೆ ಹೊಡೆದಿರೋರು. ಮರ್ತೋಗಿರೋರು. ಅಷ್ಟೇ. ಆದರೆ ಇಲ್ಲಿ ಅವನು ನಮ್ಮ ಮೌಢ್ಯವನ್ನ ವೈಭವೀಕರಿಸಿ ಸಕ್ಕತ್ effective ಆಗಿ ತೋರಿಸಿರೋದ್ರಿಂದ,ಇದು ಬಹಳ ಕಾಲ ನೆನಪಿನಲ್ಲಿ ಇರುವಂಥದ್ದು.  ಮುಂದಿನ ಸರ್ತಿ, ನಮ್ಮ  ಕೆಟ್ಟ ಕೆಲಸಗಳೂ ದೊಡ್ಡ ಪರದೆಯಲ್ಲಿ ಇನ್ನೂ ಅಸಹ್ಯವಾಗಿ ಕಂಡೀತು ಎಂದು ಥಿಯೇಟರಿಗೆ ಕಾಲಿಟ್ಟಿರಬಹುದಾದ ಮಾನವಂತರು ಅಂಜುತ್ತಾರೆ. ಸರಿ ಸುಮಾರು 0.001% ಅಷ್ಟೇ ನಾವು ಸುಧಾರಿಸುತ್ತೇವೆ. ಅಷ್ಟಾದ್ರು ಆಗತ್ತಲ್ಲಾ,ಈ ನಿಟ್ಟಿನಲ್ಲಿ ಉಪ್ಪಿಯ ಪ್ರಯತ್ನ ಸೂಪರ್, I like it... I like it. :)

೫. ಕಾರ್ಪೋರೇಟ್ ರೌಡಿಸಮ್ ಅಂತ ಬ್ಯಾಂಕಿನ ಟೆಲಿಕಾಲರ್ಸ್ ಗೆ ಕಿಚಾಯ್ಸಿರುವುದು ಸೂಪರ್ :)[Like Upendra, no offence meant.]

೬. ಒಂದಂತೂ ಮೆಚ್ಚಲೇಬೇಕು. ಐಪಿಲ್, ಡಿಪಿಲ್ ಹರಾಜನ್ನು ಹೆಣ್ಣಿನ ಮಾನದ ಹರಾಜಿಗೆ ಹೋಲಿಸಿರೋದಕ್ಕೆ ನನ್ನ ಎರಡು ಥಂಬ್ಸ್ ಅಪ್. ಅಣ್ಣಾ ಉಪೇಂದ್ರ...ಎಂಥಾ ಥಿಂಕಿಂಗ್ ಕಣಯ್ಯ ನಿನ್ನದು ! ನಿಜಕ್ಕೂ ಅದು ಎಲ್ಲಾ ದೇಶದ ಆಟಗಾರರ ಮಾನದ ಹರಾಜು. ನಮ್ಮ ದೇಶಭಕ್ತಿಯ ಹರಾಜು. ನಮ್ಮ ದೇಶ ಭಕ್ತಿ ನಮ್ಮ ದೇಶದ ಹೆಣ್ಣು ಮಗಳೊಬ್ಬಳ ಮಾನದಷ್ಟೇ ಮುಖ್ಯ ಅಂತ ಸಕ್ಕತ್ತಾಗಿ ತೋರಿಸಿಕೊಟ್ಟೀದ್ದೀಯಾ, ಶಭಾಶ್ ಗುರು ! I really liked it.ನಿಜ್ವಾಗ್ಲೂ ಸೂಪರ್.

ಐ ಪಿ ಎಲ್ ಹೊಸದರಲ್ಲಿ ಸನ್ಮಾನ್ಯ ರಾಹುಲ್ ದ್ರಾವಿಡ್ ಒಂದು ಮಾತು ಹೇಳಿದ್ದರು: " ಪ್ರಪಂಚದ ಆಟಗಾರರನ್ನೆಲ್ಲಾ ಹರಾಜು ಹಾಕಿದರೆ, ಒಬ್ಬರು ಇನ್ನ್ಯಾವ್ದೋ ದೇಶ ಸೇರಿದರೆ, ಅವರು ಯಾರನ್ನು ಎದುರಿಸಿ ಆಡಬೇಕು ? ಬೇರೆ ಟೀಮಿನಲ್ಲಿರುವ ತನ್ನ ದೇಶದವನನ್ನೋ, ಅಥವಾ ತನ್ನ ಟೀಮಿನಲ್ಲಿರುವ ಬೇರೆ ದೇಶದವನನ್ನೋ ? ಇದು ನಮ್ಮ ಮಾನದ ಹರಾಜು ಹಾಕಿದಂತೆಯೇ" ಅಂತ.ಅದನ್ನ  ಸೂಚ್ಯವಾಗಿ, powerful  ಆಗಿ, effective  ಆಗಿ ತೋರಿಸಿರೋದಕ್ಕೆ,Hats off.

ನನ್ನ ತಲೆ ಇನ್ನೊಂದು angle  ನಲ್ಲಿ ಯೋಚನೆ ಮಾಡಿತು. ಹೀಗೆ ಉಪ್ಪಿ ಯೋಚಿಸಿದ್ದಾನೋ ಇಲ್ವೊ ಗೊತ್ತಿಲ್ಲ. ಕ್ರಿಕೆಟ್ಟನ್ನು ನಮ್ಮ ದೇಶದಲ್ಲಿ religion  ಥರ ಫಾಲೋ ಮಾಡ್ತಾರೆ. ಕ್ರಿಕೆಟ್ಟಿನ ಆಟಗಾರರ ಹರಾಜು ನಮ್ಮ ದೇಶದ ಧರ್ಮದ, ಮಾನದ ಹರಾಜು ಅಂತ ಹೆಣ್ಣು ಮಗಳನ್ನು ರಿಲಿಜಿಯಸ್ ಐಕಾನ್ ಆಗಿ ತೋರಿಸಿ, "ಸಾಕ್ ನಿಲ್ಸ್ರಪ್ಪಾ ಈ ಹರಾಜು" ಅಂತ ಹೇಳಕ್ಕೆ ಹೊರ್ಟಿದಾನಾ?!

೭. ಮತ್ತಿನ್ನೊಂದು ಅನಾಲಜಿಯನ್ನ ಉಪ್ಪಿ ಸಕ್ಕತ್ತಾಗಿ ಬಳಸಿಕೊಂಡಿದ್ದಾನೆ. ಅದು ಸಿ.ಎಮ್, ಹೀರೋಯಿನ್ನಿನ ಹಳ್ಳಿ ಜೀವನ, ನುಗ್ಗೇಕಾಯಿ, ಬದನೇಕಾಯಿ,ಮತ್ತು ಕಾಮನ್ ಮ್ಯಾನ್.In short, the climax.

ನಾವು ನಮ್ಮ ದೇಶವನ್ನ ನೀಟಾಗಿ ಇಟ್ಟುಕೊಂಡರೆ ಭಾರತ ಮಾತೆಯಂತೆ ಕಾಣುವ ಪ್ರತಿಯೊಬ್ಬ ಭಾರತೀಯ ಹೆಣ್ಣು ಮಗಳು ಸಿಂಗರಿಸಿಕೊಂಡಂತೆ ಅನ್ನೋದನ್ನ ಹೇಳುವ ಈ ಅನಾಲಜಿ ಸಕ್ಕತ್ತಾಗಿದೆ. ಮಂತ್ರಿಗಳು  ಏನೇ ಮಾಡಿದರೂ ನುಗ್ಗೇಕಾಯಿ ಮುರಿದಂತೆ , ಮತ್ತು ಹೇಳುವುದೆಲ್ಲಾ ಬದನೇಕಾಯಿ ಅಂತ ಸರಿಯಾಗಿ ಆಡಿಕೊಂಡಿದ್ದಾನೆ. ವೆರಿ ಗುಡ್."ಹಳ್ಳಿ ಇಲ್ಲದೇ ದಿಲ್ಲಿ ಇರಲಾರದು ಮಂತ್ರಣ್ಣಾ..." ಅಂತ ಸೈಲೆಂಟಾಗಿ ಹೇಳಿದಾನೆ. ಭೇಷ್.

ಕಾಮನ್ ಮ್ಯಾನು ಸಿ.ಎಮ್ ಆಗಬಹುದು, ಮತ್ತು ಸಿ.ಎಮ್ಮು ಕಾಮನ್ ಮ್ಯಾನೇ ಅನ್ನುವ biconditional logic,once again super :)

ಇವಕ್ಕೆ ಥಂಬ್ಸ್ ಡೌನ್:

೧. ಯಾಕ್ ಬೇಕಿತ್ತು ಡಮಾ ಡಮಾ ಮ್ಯೂಸಿಕ್ಕು ? Over  ಆಯ್ತು.

೨. " ನಾನು ಸೂಪರ್ರೋ ರಂಗ "ಸಾಂಗಿಗೆ ರಿಂಗ ರಿಂಗಾ ಟ್ಯೂನನ್ನೇ ಮಾಡಿಫೈ ಮಾಡುವ ಪೆದ್ದುತನ ಯಾಕೆ ಬೇಕಿತ್ತು ? Was that a compromise with Harikrishna’s music ?

೩. ಇಂಗ್ಲಿಶು. ಅಣ್ಣಾ ಉಪೇಂದ್ರ,  ಇಂಗ್ಲೀಶಲ್ಲಿ ಹಾಡು ಮತ್ತು ಡೈಲಾಗ್ ಗಳನ್ನ ನಾವು ಕನ್ನಡಿಗರು ಕನ್ನಡಕ್ಕಿಂತ  ಬೇಗ ಮತ್ತು ಚೆನ್ನಾಗಿ ಅರ್ಥ ಮಾಡ್ಕೊತಿವಿ ಅಂತ ನೀನು ನಮ್ಮನ್ನ ಶಾಲಲ್ಲಿ ಸುತ್ತಿ ಹೊಡಿತಿದಿಯಾ ಅನ್ನೊ ವ್ಯಂಗ್ಯವನ್ನ ನಾನು ಸಂಪೂರ್ಣವಾಗಿ ಅರ್ಥ ಮಾಡ್ಕೊತಿನಿ. ಆದ್ರೆ ಈಗ, ಮಕ್ಕಳಿಗೆ ಕನ್ನಡ ಓದಿಸಲಿಕ್ಕೆ, ಹೆಚ್ಚು ಅಂಕ ಗಳಿಸಲಿಕ್ಕೆ ತಂದೆ ತಾಯಿಯರು ಕನ್ನಡ ಮನೆಪಾಠಕ್ಕೆ ಹೋಗುತ್ತಿದ್ದಾರೆ. ಹಾಗಾಗಿ, ನೀನು ಕನ್ನಡ ಮಾತಾಡಿದರೆ, ಈಗ ಪರಭಾಷಿಗರೂ ಅರ್ಥ ಮಾಡ್ಕೊತಾರೆ, ಮುಂದಿನ ಸರ್ತಿಯಿಂದ ದಯವಿಟ್ಟು  ಹಾಡಲ್ಲಿ ಕನ್ನಡವನ್ನು ಬಳಸುವಂಥವನಾಗು.ನಮಗೆ ಮತ್ತು ಅವರಿಗೂ ಸಹ ಕನ್ನಡ ಅರ್ಥ ಆಗತ್ತೆ.

೪.ಹೈ ಬಿ.ಪಿ ಪೇಷೆಂಟ್ ಥರ ಡೈಲಾಗ್ ಹೇಳೋ ಅಗತ್ಯ ಇಲ್ಲ. ಪ್ಲೀಸ್, ಕೀಪ್ ಯುವರ್ ಕೂಲ್.

ಉಪ್ಪಿಯ ಚಿತ್ರದಲ್ಲಿ ನನಗೆ ಕಂಡದ್ದು ಇಷ್ಟು. ಚಿತ್ರವನ್ನು ನಾನು ಅರ್ಥ ಮಾಡಿಕೊಂಡಿದ್ದು ಇಷ್ಟು. ಇನ್ನು ಉಪ್ಪಿಯ ಆ ಗರ ತಿರುಗುವ ಕಣ್ಣು ಸ್ವಲ್ಪ ಕಾಲ ತದೇಕಚಿತ್ತದಿಂದ ನೋಡಿದರೆ, ಅದು ಗಿಮ್ಮಿಕ್ ಇರಲಿ, ಸ್ಟೈಲಿರಲಿ, ಏನಾದರೂ ಇರಲಿ, I feel he is a man who is in constant search of something new and he wants to be the first one to capture it. He is an innovator of a different type, a writer with a satirical style and a director with a fantastic imagination and flamboyance.He waits to outwit and outsmart the viewer. In short, he is like an open ended experiment .There is always new angles of looking at it, new dimensions to it and newer directions to explore in it. If you  think you have understood Uppi and his movies fully, there is always an angle which has not been looked at.[ನಾನು ಟೈಂ ಪಾಸಿಗೆ ಲೈಬ್ರರಿಯಲ್ಲಿ ಸೈಕಾಲಜಿ ಓದಿದ್ದರ ಪರಿಣಾಮ ಈ ಅನಾಲಿಸಿಸ್ ಇದ್ದಿರಬಹುದು. ಗೊತ್ತಿಲ್ಲ.]

ಆದರೂ, ಉಪ್ಪಿ ಸ್ವಲ್ಪ ಅರ್ಥ ಆದ. ಮತ್ತೆ ಚಿತ್ರವೂ. :)