RSS

ಸೈರಾ ನರಸಿಂಹ ರೆಡ್ಡಿ

ಪಾಣಿಪತ್ ಚಲನಚಿತ್ರವನ್ನು ನೋಡಿದ ನಂತರ ಈ ಚಲನಚಿತ್ರವನ್ನು ನೋಡಿದ್ದರಿಂದ ಹಲವಾರು ಬಾರಿ ಎರಡೂ ಚಿತ್ರಗಳನ್ನು ಹೋಲಿಸುವ ಹಾಗಾಯಿತು. ಪಾಣಿಪತ್ ಚಲನಚಿತ್ರ ಮರಾಠಾ ಮತ್ತು ಮುಸಲ್ಮಾನರ ಮಧ್ಯೆ ನಡೆದ ಹೋರಾಟದ ಕಥೆಯಾದರೆ ಸೈರಾ ನರಸಿಂಹ ರೆಡ್ಡಿ ಚಿತ್ರ ಆಂಧ್ರದ ಪಾಳೆಯಗಾರರು ಮತ್ತು ಬ್ರಿಟಿಷರಿಗೂ ನಡೆದ ಹೋರಾಟದ ಕಥೆ .

 ಸೈರಾ ನರಸಿಂಹ ರೆಡ್ಡಿ ದಕ್ಷಿಣ ಭಾರತದಲ್ಲಿಸ್ವಾತಂತ್ರ್ಯ ಹೋರಾಟ ನಡೆಸಿದ ಮೊಟ್ಟಮೊದಲನೆಯವನು ಎಂದು ಈ ಚಿತ್ರ ದಾಖಲಿಸುತ್ತದೆ. ಹಲವಾರು ಜಾನಪದ ಕಥೆಗಳು ಮತ್ತು ಕಲ್ಪನೆಗಳನ್ನೆಲ್ಲಾ ಸೇರಿಸಿ ಈ ಚಿತ್ರವನ್ನು ಮಾಡಲಾಗಿದೆ ಎಂದು ಅವರು ಮೊದಲೇ Disclaimer ಹಾಕುವುದರ ಮೂಲಕ ಬಹಳ ಜಾಣತನದಿಂದ ಕೆಲವು ಪ್ರಶ್ನೆಗಳನ್ನು ಏಳದಂತೆ ತಡೆಹಿಡಿದಿದ್ದಾರೆ . ಪಾಣಿಪತ್ ಚಲನಚಿತ್ರಕ್ಕೆ ಹೋಲಿಸಿದರೆ ಇಲ್ಲಿನ ಪಾತ್ರವರ್ಗ ಅತ್ಯಂತ ನ್ಯಾಯಯುತವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದೆ ಎಂದು ಹೇಳಲು ಬಹಳ ಖುಷಿಯಾಗುತ್ತದೆ. ಚಿತ್ರ ತೆಲುಗಿನದ್ದಾದರೂ ಕಿಚ್ಚ ಸುದೀಪ್, ಪವಿತ್ರಾ ಲೋಕೇಶ್ ಮತ್ತು ಲಕ್ಷ್ಮೀ ಗೋಪಾಲಸ್ವಾಮಿ ಯಂತಹ ಕನ್ನಡದ ನಟ ನಟಿಯರು ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸುತ್ತದೆ.

ಚಿತ್ರ ಕನ್ನಡಕ್ಕೆ ಡಬ್ ಆಗಿರುವಾಗ ಪವಿತ್ರಾ ಲೋಕೇಶ್, ಕಿಚ್ಚ ಸುದೀಪ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಅವರೇ ಇದಕ್ಕೆ ಡಬ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಕಿಚ್ಚ ಸುದೀಪ್ ಆಕ್ಟಿಂಗ್ ಬಹಳ subtle ಆಗಿದ್ದು ಅವರ ಪಾತ್ರ ಪೋಷಣೆ ಮತ್ತು ಪಾತ್ರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ . ಚಿರಂಜೀವಿ ಅವರ ಬಗ್ಗೆ ಮತ್ತು ಅವರ ಅಭಿನಯದ ಬಗ್ಗೆ ಮಾತಾಡಲು ಏನೂ ಇಲ್ಲ. ಅವರು ಅಷ್ಟಲ್ಲದೆ ಮೆಗಾಸ್ಟಾರ್ ಅಲ್ಲ ಎಂಬುದನ್ನು ಮತ್ತೊಮ್ಮೆ ಈ ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ. ತಮನ್ನಾ ಮತ್ತು ನಯನತಾರಾ ಅವರು ಅಭಿನಯಿಸಿರುವುದು ಸ್ವಲ್ಪ ನಿರಾಶೆ ಉಂಟು ಮಾಡಿದರೂ ಅದರಿಂದ ಕಥೆಯ ಓಘಕ್ಕೆ ಆಗಲಿ ಅಥವಾ ಚಿರಂಜೀವಿ ಮತ್ತಿತರರ ಅಭಿನಯದ ಅಭಿನಯಕ್ಕಾಗಿ ಯಾವುದೇ ಧಕ್ಕೆ ಬಾರದಂತೆ ನಿರ್ದೇಶಕರು ಜಾಗರೂಕತೆ ವಹಿಸಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಅಮಿತಾಬ್ ಬಚ್ಚನ್ ಅವರ ಅಭಿನಯ ಮನಸೂರೆಗೊಳ್ಳುತ್ತದೆ .ಇದರಿಂದಾಗಿ ದಕ್ಷಿಣ ಭಾರತದ ಪ್ರಮುಖ ನಟರೆಲ್ಲರೂ ಒಂದೇ ಚಿತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಇದೆ.

 ಕ್ಲೈಮಾಕ್ಸನ್ನು ಬಹಳಷ್ಟು ತೆಲುಗು ಸಿನಿಮಾಗಳ ಹಾಗೆ ವೈಭವೀಕರಿಸಿರುವುದರಿಂದ ನಿಜ ಯಾವುದು ಸುಳ್ಳು ಯಾವುದು ಎಂದು ನಿರ್ಧರಿಸಲು ಕಡೆಗೆ ವೀಕ್ಷಕ ಕಷ್ಟಪಡಬೇಕಾದ ಸ್ಥಿತಿ ಉದ್ಭವವಾಗಿದೆ ಎಂದು ನನಗೆ ಅನ್ನಿಸಿದೆ. ಸೈರಾ ನರಸಿಂಹ ರೆಡ್ಡಿ ಯನ್ನು ಬ್ರಿಟಿಷರು ನೇಣು ಹಾಕಿದ್ದು ನಿಜವಾಗಿದ್ದರೆ ನರಸಿಂಹರೆಡ್ಡಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ನೇಣಿಗೆ ಶರಣಾದನೇ ಅಥವಾ ಬ್ರಿಟಿಷರು ಅವನನ್ನು ಇನ್ನಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಯೇ ಎಂಬುದನ್ನು ನಿರ್ಣಯಿಸಲು ಸ್ವಲ್ಪ ಕಷ್ಟವಾಗುತ್ತದೆ .ಅದನ್ನು ಖಚಿತ ಪಡಿಸಿಕೊಳ್ಳಲು ನಾನು ಸೈರಾ ನರಸಿಂಹ ರೆಡ್ಡಿ ಯ ಬಗ್ಗೆ ದಾಖಲೆಗಳನ್ನು ಹುಡುಕುತ್ತಿದ್ದೇನೆ. ಪಕ್ಕದ ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಎಂತೆಂತಹ ಹೋರಾಟಗಳು ನಡೆದಿವೆ ಎಂಬ ಒಂದು ಅಂದಾಜು ಈ ಚಿತ್ರದಿಂದ ನನಗೆ ಸಿಕ್ಕಿದೆ.ಮೇಕಿಂಗ್ ನಲ್ಲಿ ತೆಲುಗು ಸಿನೆಮಾ ಯಾವತ್ತಿದ್ದರೂ ಮುಂದು. ಆ ವಿಷಯವನ್ನು ಮತ್ತೊಮ್ಮೆ ಮಗದೊಮ್ಮೆ ಈ ಚಿತ್ರ ಸಾಬೀತು ಮಾಡಿ ತೋರಿಸಿದೆ. ಪಾಣಿಪತ್ ನಂತೆಯೇ ಡೀಟೈಲಿಂಗ್ ಕೂಡ ಅಮೋಘವಾಗಿ ಈ ಚಿತ್ರದಲ್ಲೂ ಮೂಡಿಬಂದಿದೆ. ಆದರೆ ಈ ಚಲನಚಿತ್ರದ ಕಥೆ ಎಲ್ಲಿಯೂ ಸಹ ಬೋರಾಗದಂತೆ ನಿರ್ದೇಶಕ ಬಹಳ ಚಾಕುಚಕ್ಯತೆಯಿಂದ ನಿರ್ದೇಶನ ಮಾಡಿದ್ದಾರೆ ಎಂದು ಹೇಳಬಹುದು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಚಿತ್ರ ನಾ ನೋಡಿದ್ದು ಸ್ಟಾಲಿನ್. ಅದಾದ ಮೇಲೆ ಶ್ರೀ ಮಂಜುನಾಥ.ಅದಾದ ನಂತರ ಸೈರಾ ನರಸಿಂಹರೆಡ್ಡಿ. ಎಲ್ಲ ಚಿತ್ರಗಳಲ್ಲೂ ಅವರ ಅಭಿನಯ ಅಮೋಘ. ಹಾಗಾಗಿ ಅವರ ಬಳಗಕ್ಕೆ ನನ್ನದೊಂದು ಹೊಸ ಸೇರ್ಪಡೆ .

ಲಾಕ್ ಡೌನ್ ಸಿನಿಮಾ ಮ್ಯರಾಥಾನ್

ಬಾಣಂತನದ ಕಾಲದಿಂದಲೂ ನನಗೆ ಚಿತ್ರ ಮಂದಿರಗಳಿಗೆ ಹೋಗಿ ಸಿನಿಮಾ ನೋಡುವುದು ಕಷ್ಟ ಸಾಧ್ಯವಾಗಿತ್ತು. ಏಕೆಂದರೆ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ನನ್ನ ಕಷ್ಟವನ್ನು ಅರಿತ ನನ್ನ ಗಂಡ ೫೫ ಇಂಚಿನ ದೊಡ್ಡ ಟಿವಿ, ಡಿವಿಡಿ ಪ್ಲೇಯರ್ ಮತ್ತು ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ subscription ತೆಗೆದುಕೊಂಡು ನನಗೆ ಮಹದುಪಕಾರ ಮಾಡಿ ಕೊಟ್ಟಿದ್ದರಾದರೂ ನನಗೆ B.Ed ವ್ಯಾಸಂಗದ ಕಾರಣದಿಂದ ಯಾವುದೇ ಚಿತ್ರಗಳನ್ನು ನೋಡಲಾಗಿರಲಿಲ್ಲ. ಲಾಕ್ ಡೌನ್ ಬಂದ ನಂತರ ಕೆಲವು ಚಿತ್ರಗಳನ್ನು ಬಹಳ ಆಸಕ್ತಿಯಿಂದ ನೋಡಿದೆ. ಅವುಗಳ ಪಟ್ಟಿಯನ್ನು ಮೊದಲು ನೀಡುತ್ತೇನೆ.

 ಪಾಣಿಪತ್ (ಹಿಂದಿ)
ಸೈರಾ ನರಸಿಂಹ ರೆಡ್ಡಿ (ಮೂಲ:ತೆಲುಗು, ಕನ್ನಡಕ್ಕೆ ಡಬ್ ಆಗಿದೆ)
 ಸೀಕ್ರೆಟ್ ಸೂಪರ್ಸ್ಟಾರ್ (ಹಿಂದಿ)
 ಕೂರ್ಮಾವತಾರ (ಕನ್ನಡ)
 The bridge on the river kwai (English)
 ತಬ್ಬಲಿಯು ನೀನಾದೆ ಮಗನೆ (ಕನ್ನಡ)
ದಿಯಾ (ಕನ್ನಡ)
 ನಮ್ಮ ಗಣಿ ಬಿಕಾಂ Pass (ಕನ್ನಡ)
 ಮಾಯಾಬಜಾರ್ (ಕನ್ನಡ)

 ನಾನು ನೋಡಲು ಆಯ್ಕೆ ಮಾಡಿಕೊಳ್ಳುವ ಚಿತ್ರಗಳು ಕೆಲವರಿಗೆ ವಿಚಿತ್ರವೆನಿಸಿದರೂ ಸಹ ನನ್ನ ಆಯ್ಕೆ ವಿಚಿತ್ರವೆಂದರೆ ನಾನು ಹೇಳಬಯಸುತ್ತೇನೆ. ಕಮರ್ಷಿಯಲ್ಲಾಗಿ ಓಡುವ ಚಲನಚಿತ್ರಗಳು ನನ್ನನ್ನು ಹೆಚ್ಚು ಸೆಳೆಯುವುದಿಲ್ಲ. ಕಮರ್ಷಿಯಲ್ ಆಗಲು ಚಿತ್ರಕ್ಕೆ ಅದರದೇ ಆದ ಕಾರಣಗಳಿರುತ್ತವೆ. ಆದರೆ ಒಂದು ಚಿತ್ರ ಹೇಗೆ ತಯಾರಾಗಿದೆ ಎಂಬುದು ನನ್ನ ಹುಡುಕಾಟವಾಗಿರುತ್ತದೆ. ಹಾಗಾಗಿ ನಾನು ನೋಡಿರುವ ಚಲನಚಿತ್ರಗಳು ಎಷ್ಟೋ ಜನ ಕೇಳಿರದೆ ಹೋಗಲು ಸಾಧ್ಯವಿದೆ. ಮೊದಲನೇ ಚಿತ್ರದ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ.

 ಚಿತ್ರದ ಹೆಸರು: ಪಾಣಿಪತ್

 ಈ ಚಿತ್ರದ ನಿರ್ದೇಶನ ಆಶುತೋಷ್ ಗೋವಾರಿಕರ್ ಅವರದ್ದು. ಚಿತ್ರವು ಇತಿಹಾಸದ ಪಠ್ಯ ಪುಸ್ತಕವನ್ನು ಓದುವ ಬದಲು ನೋಡಿದಂತಿತ್ತು . ಮೊದಲೇ ಚಿತ್ರವು ಬಹಳ ದೊಡ್ಡದಾದ್ದರಿಂದ (3 hours) ಒಂದೇ ದಿನ ನೋಡುವುದು ಅಸಾಧ್ಯ ಎಂದು ನಾನು ಮನಗಂಡೆ . ಹಾಗಾಗಿ ದಿನಕ್ಕೆ ಅರ್ಧ ಗಂಟೆ ಈ ಚಿತ್ರವನ್ನು ನೋಡಿದೆ. ಮೇಕಿಂಗ್ ಬಹಳ ಅದ್ಭುತವಾಗಿತ್ತು. ಡೀಟೈಲಿಂಗ್ ಅಮೋಘವಾಗಿದೆ. ಆದರೆ ಪಾತ್ರವರ್ಗ ಬಹಳ ನಿರಾಶೆಗೊಳಿಸುತ್ತದೆ. ಮೋನಿ್ಶ್ ಬೆಹ್ಲ್ ಮತ್ತು ಪದ್ಮಿನಿ ಕೊಲ್ಹಾಪುರಿ ಅವರ ನಟನೆ ಹೈಕ್ಲಾಸ್. ಅರ್ಜುನ್ ಕಪೂರ್ ನಿಜಕ್ಕೂ ಬಹಳ ಕಷ್ಟಪಟ್ಟು ಅಭಿನಯಿಸಿದ್ದಾರೆ ಎಂಬುದು ಪ್ರತಿ ಫ್ರೇಮಿನಲ್ಲೂ ಗೊತ್ತಾಗುತ್ತದೆ. ಕೃತಿ ಸನೋನ್ ಎಂಬ ಗ್ಲ್ಯಾಮರ್ ಪ್ಚ್ಚುಫ್ಯಾಕ್ಟರ್ ವರ್ಕ್ ಆಗಿಲ್ಲ. ಸಂಜಯ್ ದತ್ ಆಕ್ಟಿಂಗ್ ಬಹಳ ಪರಿಣಾಮಕಾರಿಯಾಗಿತ್ತು .

 ಈ ಚಿತ್ರವನ್ನು ನೀವು ಒಂದೇ ಸರ್ತಿ ಮೂರು ಗಂಟೆ ಕಾಲ ಕುಳಿತು ನೋಡಿದರೆ ಕಡೆಯಲ್ಲಿ ಏತಕ್ಕಾಗಿ ಈ ಚಿತ್ರ ನೋಡಿದೆ ಎಂಬ ಪ್ರಶ್ನೆ ಉದ್ಭವವಾದರೂ ಆಶ್ಚರ್ಯವಿಲ್ಲ. ನಾನು ಒಂದು ವಾರ ಈ ಚಿತ್ರವನ್ನು ನೋಡಿದ್ದರಿಂದ ಆ ಅರ್ಧ ಗಂಟೆಯನ್ನು ಯಾತಕ್ಕಾದರೂ ಬಳಸಬಹುದಿತ್ತು ಎಂದು ಖಂಡಿತಾ ಅನಿಸಿತ್ತು. ಇತಿಹಾಸವನ್ನು ಬೇರೊಂದು ದೃಷ್ಟಿಕೋನದಿಂದ ನಾವು ನೋಡಬಹುದು ಎಂಬುದನ್ನು ಬಿಟ್ಟರೆ ಚಿತ್ರದಿಂದ ನನಗೆ ಏನೂ ಲಾಭವಾಗಲಿಲ್ಲ.

 ಆಶುತೋಷ್ ಗೋವಾರಿಕರ್ ಅವರಿಗೆ ಬಹಳ ನಷ್ಟವಾಗಿದೆ ಎಂಬುದನ್ನು ಈ ಚಿತ್ರದಿಂದ ನಾವು ಗ್ರಹಿಸಬಹುದು. ಅವರು ಏನೋ ಮಾಡಲು ಹೋಗಿ ಏನೋ ಆಗಿದೆ ಎಂದು ನನಗೆ ಅನಿಸಿದೆ. ಆಶುತೋಷ್ ಗೋವಾರಿಕರ್ ಅವರು ಲಗಾನ್ ಮತ್ತು ಸ್ವದೇಸ್ ನಿರ್ದೇಶನ ಮಾಡಿದ ಮೇಲೆ ನಾನು ಅವರಿಂದ ಮತ್ತಷ್ಟು ಸದಭಿರುಚಿಯ ಮತ್ತು ಚಿಂತನೆಗೆ ಹಚ್ಚುವ ಚಿತ್ರಗಳನ್ನು ಅಪೇಕ್ಷಿಸಿದ್ದೆ. ಪಾಣಿಪತ್ ಸದಭಿರುಚಿಯ ಚಿತ್ರವಾಗಿದ್ದರೂ, ಚಿತ್ರದ ವಿಷಯ ಅತ್ಯಂತ ಗಹನವಾಗಿದ್ದರೂ ,ನಿರೂಪಣಾ ತಂತ್ರ ದಯನೀಯವಾಗಿ ಸೋತಿರುವುದರಿಂದ ಚಿತ್ರವೂ ಖಂಡಿತ ಯಾರ ಮನಸ್ಸಿನಲ್ಲೂ ಉಳಿಯಲಾರದು. ಬಾಕ್ಸಾಫೀಸ್ ನಲ್ಲಿ ಉಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ.