RSS

ಸೈರಾ ನರಸಿಂಹ ರೆಡ್ಡಿ

ಪಾಣಿಪತ್ ಚಲನಚಿತ್ರವನ್ನು ನೋಡಿದ ನಂತರ ಈ ಚಲನಚಿತ್ರವನ್ನು ನೋಡಿದ್ದರಿಂದ ಹಲವಾರು ಬಾರಿ ಎರಡೂ ಚಿತ್ರಗಳನ್ನು ಹೋಲಿಸುವ ಹಾಗಾಯಿತು. ಪಾಣಿಪತ್ ಚಲನಚಿತ್ರ ಮರಾಠಾ ಮತ್ತು ಮುಸಲ್ಮಾನರ ಮಧ್ಯೆ ನಡೆದ ಹೋರಾಟದ ಕಥೆಯಾದರೆ ಸೈರಾ ನರಸಿಂಹ ರೆಡ್ಡಿ ಚಿತ್ರ ಆಂಧ್ರದ ಪಾಳೆಯಗಾರರು ಮತ್ತು ಬ್ರಿಟಿಷರಿಗೂ ನಡೆದ ಹೋರಾಟದ ಕಥೆ .

 ಸೈರಾ ನರಸಿಂಹ ರೆಡ್ಡಿ ದಕ್ಷಿಣ ಭಾರತದಲ್ಲಿಸ್ವಾತಂತ್ರ್ಯ ಹೋರಾಟ ನಡೆಸಿದ ಮೊಟ್ಟಮೊದಲನೆಯವನು ಎಂದು ಈ ಚಿತ್ರ ದಾಖಲಿಸುತ್ತದೆ. ಹಲವಾರು ಜಾನಪದ ಕಥೆಗಳು ಮತ್ತು ಕಲ್ಪನೆಗಳನ್ನೆಲ್ಲಾ ಸೇರಿಸಿ ಈ ಚಿತ್ರವನ್ನು ಮಾಡಲಾಗಿದೆ ಎಂದು ಅವರು ಮೊದಲೇ Disclaimer ಹಾಕುವುದರ ಮೂಲಕ ಬಹಳ ಜಾಣತನದಿಂದ ಕೆಲವು ಪ್ರಶ್ನೆಗಳನ್ನು ಏಳದಂತೆ ತಡೆಹಿಡಿದಿದ್ದಾರೆ . ಪಾಣಿಪತ್ ಚಲನಚಿತ್ರಕ್ಕೆ ಹೋಲಿಸಿದರೆ ಇಲ್ಲಿನ ಪಾತ್ರವರ್ಗ ಅತ್ಯಂತ ನ್ಯಾಯಯುತವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದೆ ಎಂದು ಹೇಳಲು ಬಹಳ ಖುಷಿಯಾಗುತ್ತದೆ. ಚಿತ್ರ ತೆಲುಗಿನದ್ದಾದರೂ ಕಿಚ್ಚ ಸುದೀಪ್, ಪವಿತ್ರಾ ಲೋಕೇಶ್ ಮತ್ತು ಲಕ್ಷ್ಮೀ ಗೋಪಾಲಸ್ವಾಮಿ ಯಂತಹ ಕನ್ನಡದ ನಟ ನಟಿಯರು ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ಕನ್ನಡಿಗರಲ್ಲಿ ಹೆಮ್ಮೆ ಮೂಡಿಸುತ್ತದೆ.

ಚಿತ್ರ ಕನ್ನಡಕ್ಕೆ ಡಬ್ ಆಗಿರುವಾಗ ಪವಿತ್ರಾ ಲೋಕೇಶ್, ಕಿಚ್ಚ ಸುದೀಪ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಅವರೇ ಇದಕ್ಕೆ ಡಬ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಕಿಚ್ಚ ಸುದೀಪ್ ಆಕ್ಟಿಂಗ್ ಬಹಳ subtle ಆಗಿದ್ದು ಅವರ ಪಾತ್ರ ಪೋಷಣೆ ಮತ್ತು ಪಾತ್ರ ನಿರ್ವಹಣೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ . ಚಿರಂಜೀವಿ ಅವರ ಬಗ್ಗೆ ಮತ್ತು ಅವರ ಅಭಿನಯದ ಬಗ್ಗೆ ಮಾತಾಡಲು ಏನೂ ಇಲ್ಲ. ಅವರು ಅಷ್ಟಲ್ಲದೆ ಮೆಗಾಸ್ಟಾರ್ ಅಲ್ಲ ಎಂಬುದನ್ನು ಮತ್ತೊಮ್ಮೆ ಈ ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ. ತಮನ್ನಾ ಮತ್ತು ನಯನತಾರಾ ಅವರು ಅಭಿನಯಿಸಿರುವುದು ಸ್ವಲ್ಪ ನಿರಾಶೆ ಉಂಟು ಮಾಡಿದರೂ ಅದರಿಂದ ಕಥೆಯ ಓಘಕ್ಕೆ ಆಗಲಿ ಅಥವಾ ಚಿರಂಜೀವಿ ಮತ್ತಿತರರ ಅಭಿನಯದ ಅಭಿನಯಕ್ಕಾಗಿ ಯಾವುದೇ ಧಕ್ಕೆ ಬಾರದಂತೆ ನಿರ್ದೇಶಕರು ಜಾಗರೂಕತೆ ವಹಿಸಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಅಮಿತಾಬ್ ಬಚ್ಚನ್ ಅವರ ಅಭಿನಯ ಮನಸೂರೆಗೊಳ್ಳುತ್ತದೆ .ಇದರಿಂದಾಗಿ ದಕ್ಷಿಣ ಭಾರತದ ಪ್ರಮುಖ ನಟರೆಲ್ಲರೂ ಒಂದೇ ಚಿತ್ರದಲ್ಲಿ ಅಭಿನಯಿಸಿದ ಹೆಗ್ಗಳಿಕೆ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಇದೆ.

 ಕ್ಲೈಮಾಕ್ಸನ್ನು ಬಹಳಷ್ಟು ತೆಲುಗು ಸಿನಿಮಾಗಳ ಹಾಗೆ ವೈಭವೀಕರಿಸಿರುವುದರಿಂದ ನಿಜ ಯಾವುದು ಸುಳ್ಳು ಯಾವುದು ಎಂದು ನಿರ್ಧರಿಸಲು ಕಡೆಗೆ ವೀಕ್ಷಕ ಕಷ್ಟಪಡಬೇಕಾದ ಸ್ಥಿತಿ ಉದ್ಭವವಾಗಿದೆ ಎಂದು ನನಗೆ ಅನ್ನಿಸಿದೆ. ಸೈರಾ ನರಸಿಂಹ ರೆಡ್ಡಿ ಯನ್ನು ಬ್ರಿಟಿಷರು ನೇಣು ಹಾಕಿದ್ದು ನಿಜವಾಗಿದ್ದರೆ ನರಸಿಂಹರೆಡ್ಡಿ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ನೇಣಿಗೆ ಶರಣಾದನೇ ಅಥವಾ ಬ್ರಿಟಿಷರು ಅವನನ್ನು ಇನ್ನಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಯೇ ಎಂಬುದನ್ನು ನಿರ್ಣಯಿಸಲು ಸ್ವಲ್ಪ ಕಷ್ಟವಾಗುತ್ತದೆ .ಅದನ್ನು ಖಚಿತ ಪಡಿಸಿಕೊಳ್ಳಲು ನಾನು ಸೈರಾ ನರಸಿಂಹ ರೆಡ್ಡಿ ಯ ಬಗ್ಗೆ ದಾಖಲೆಗಳನ್ನು ಹುಡುಕುತ್ತಿದ್ದೇನೆ. ಪಕ್ಕದ ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಎಂತೆಂತಹ ಹೋರಾಟಗಳು ನಡೆದಿವೆ ಎಂಬ ಒಂದು ಅಂದಾಜು ಈ ಚಿತ್ರದಿಂದ ನನಗೆ ಸಿಕ್ಕಿದೆ.ಮೇಕಿಂಗ್ ನಲ್ಲಿ ತೆಲುಗು ಸಿನೆಮಾ ಯಾವತ್ತಿದ್ದರೂ ಮುಂದು. ಆ ವಿಷಯವನ್ನು ಮತ್ತೊಮ್ಮೆ ಮಗದೊಮ್ಮೆ ಈ ಚಿತ್ರ ಸಾಬೀತು ಮಾಡಿ ತೋರಿಸಿದೆ. ಪಾಣಿಪತ್ ನಂತೆಯೇ ಡೀಟೈಲಿಂಗ್ ಕೂಡ ಅಮೋಘವಾಗಿ ಈ ಚಿತ್ರದಲ್ಲೂ ಮೂಡಿಬಂದಿದೆ. ಆದರೆ ಈ ಚಲನಚಿತ್ರದ ಕಥೆ ಎಲ್ಲಿಯೂ ಸಹ ಬೋರಾಗದಂತೆ ನಿರ್ದೇಶಕ ಬಹಳ ಚಾಕುಚಕ್ಯತೆಯಿಂದ ನಿರ್ದೇಶನ ಮಾಡಿದ್ದಾರೆ ಎಂದು ಹೇಳಬಹುದು. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಚಿತ್ರ ನಾ ನೋಡಿದ್ದು ಸ್ಟಾಲಿನ್. ಅದಾದ ಮೇಲೆ ಶ್ರೀ ಮಂಜುನಾಥ.ಅದಾದ ನಂತರ ಸೈರಾ ನರಸಿಂಹರೆಡ್ಡಿ. ಎಲ್ಲ ಚಿತ್ರಗಳಲ್ಲೂ ಅವರ ಅಭಿನಯ ಅಮೋಘ. ಹಾಗಾಗಿ ಅವರ ಬಳಗಕ್ಕೆ ನನ್ನದೊಂದು ಹೊಸ ಸೇರ್ಪಡೆ .

0 comments:

Post a Comment